ಬೆಂಗಳೂರು: ನಿಯಮ ಉಲ್ಲಂಘಿಸಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದ 19.106 ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ನೋಟಿಸ್ ನೀಡಿದೆ.
ಆಹಾರ ಇಲಾಖೆಯಿಂದ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಶಿಕ್ಷಕರು, ಸಾರಿಗೆ ಸಂಸ್ಥೆಯ ನೌಕರರು, ಪೊಲೀಸರು ಕೂಡ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನು ಪಡೆದುಕೊಂಡಿರುವುದು ಗೊತ್ತಾಗಿದೆ. ಶ್ರೀಮಂತರು, ಅನರ್ಹರು ಕೂಡ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಉಚಿತವಾಗಿ ಅಕ್ಕಿ, ಗೋಧಿ, ರಾಗಿ ಇನ್ನಿತರ ಪಡಿತರ ಪಡೆದುಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲು ನೋಟಿಸ್ ಜಾರಿ ಮಾಡಲಾಗಿದೆ. ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.
ಅನರ್ಹರು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳನ್ನು ಪಡೆದುಕೊಂಡಿದ್ದಲ್ಲಿ ಕಾರ್ಡ್ ಗಳನ್ನು ಹಿಂತಿರುಗಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರದಿಂದಲೇ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಿಕ್ಕಿಬಿದ್ದವರಿಂದ ಇದುವರೆಗೆ ಪಡೆದುಕೊಂಡ ಆಹಾರ ಪದಾರ್ಥ ಲೆಕ್ಕ ಮಾಡಿ ಪ್ರತಿ ಕೆಜಿಗೆ 35 ರೂಪಾಯಿಯಂತೆ ದಂಡ ವಸೂಲಿ ಮಾಡಲಾಗುವುದು ಎಂದು ಹೇಳಲಾಗಿದೆ.
ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರು ನೋಟಿಸ್ ತಲುಪಿದ 7 ದಿನಗಳೊಳಗೆ ಉತ್ತರ ನೀಡಬೇಕು. ಇಲ್ಲವೇ ದಂಡ ಪಾವತಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಲಾಗಿದೆ
ಆಹಾರ ಇಲಾಖೆಯಿಂದ ಅಕ್ರಮವಾಗಿ ಪಡಿತರಚೀಟಿ ಪಡೆದವರ ಪರಿಶೀಲನೆ ಕಾರ್ಯ ಮುಂದುವರೆದಿದೆ. ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯಡಿ ಆಯಾ ಇಲಾಖೆಗಳ ಮುಖ್ಯಸ್ಥರಿಂದ ಪ್ರತಿ ಸರ್ಕಾರಿ ನೌಕರರು ನಿಗಮ ಮಂಡಳಿಗಳು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಮತ್ತು ಸಿಬ್ಬಂದಿಯ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆಯಾದ ಆಧಾರ್ ಸಂಖ್ಯೆಗೆ ತಾಳೆ ಮಾಡಲಾಗಿದ್ದು ಈಸಂದರ್ಭದಲ್ಲಿ 19,106 ನೌಕರರು ಸಿಕ್ಕಿಬಿದ್ದಿದ್ದಾರೆ. ಇವರೆಲ್ಲರೂ ಉಚಿತವಾಗಿ ಪಡಿತರ ಪಡೆಯುತ್ತಿರುವುದು ಗೊತ್ತಾಗಿದ್ದು, ನೋಟಿಸ್ ನೀಡಲಾಗಿದೆ.