alex Certify ಕೊರೋನಾ ತಡೆಗೆ ಪರಿಣಾಮಕಾರಿ ಕಾರ್ಯ: ತೀರ್ಥಹಳ್ಳಿ ವೈದ್ಯ ಗಣೇಶ್ ಭಟ್ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಡೆಗೆ ಪರಿಣಾಮಕಾರಿ ಕಾರ್ಯ: ತೀರ್ಥಹಳ್ಳಿ ವೈದ್ಯ ಗಣೇಶ್ ಭಟ್ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್

ಶಿವಮೊಗ್ಗ: ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಅರವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗಣೇಶ್ ಭಟ್ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ನಿರ್ವಹಣೆ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು.

ಕರೋನಾ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಆಯ್ದ 11 ಮಂದಿ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಫೀಡ್‌ಬ್ಯಾಕ್ ಪಡೆದುಕೊಂಡರು. ತಜ್ಞ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮುಖ್ಯಮಂತ್ರಿ ಅವರೊಂದಿಗೆ ಹಂಚಿಕೊAಡು ಸಲಹೆ ಸೂಚನೆಗಳನ್ನು ಸಹ ನೀಡಿದರು.

ತೀರ್ಥಹಳ್ಳಿ ತಾಲೂಕು ಪೂರ್ಣ ಮಲೆನಾಡು ಪ್ರದೇಶವಾಗಿದ್ದು, ಅಲ್ಲಿನ ಗ್ರಾಮೀಣ ಭಾಗದ ಪರಿಸ್ಥಿತಿ ಹೇಗಿದೆ? ತಾಲೂಕು ಕೇಂದ್ರದಿಂದದ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಲು ಯಾವ ರೀತಿ ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡಿದ್ದೀರಿ? ತಾಲೂಕಿನಲ್ಲಿ ಪ್ರಸ್ತುತ ಎಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ? ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ವ್ಯವಸ್ಥೆ ಹೇಗಿದೆ? ಗ್ರಾಮೀಣ ಪ್ರದೇಶದ ಜನರ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮಗಳ ಕುರಿತು ನಿಮ್ಮ ಸಲಹೆಗಳೇನಾದರೂ ಇದ್ದರೆ ತಿಳಿಸಿ. ಇವು ಮುಖ್ಯಮಂತ್ರಿ ಅವರು ಡಾ.ಗಣೇಶ್ ಭಟ್ ಅವರೊಂದಿಗೆ ಕೇಳಿದ ಪ್ರಶ್ನೆಗಳು.

100 ಬೆಡ್ ಆಸ್ಪತ್ರೆಯಲ್ಲಿ 50ಬೆಡ್ ಕೋವಿಡ್‌ಗೆ ಮೀಸಲಾಗಿರಿಸಲಾಗಿದೆ. 47 ಪಾಸಿಟಿವ್ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಆಕ್ಸಿಜನ್‌ನಲ್ಲಿದ್ದಾರೆ. ಪ್ರತಿ ದಿನ ಸಂಜೆ ತಾಲೂಕು ಮೆಡಿಕಲ್ ಆಫೀಸರ್, ತಹಶೀಲ್ದಾರ್, ಶಾಸಕರು ಸಭೆಯನ್ನು ನಡೆಸಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸುತ್ತೇವೆ. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ವ್ಯವಸ್ಥೆಯನ್ನು ಉತ್ತಮಪಡಿಸಲು ಸಾಧ್ಯವಾಗಿದೆ.

ಪ್ರಸ್ತುತ ತಾಲೂಕು ಆಸ್ಪತ್ರೆಯಲ್ಲಿ 2 ಅಂಬುಲೆನ್ಸ್ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕು ಅಂಬುಲೆನ್ಸ್ ಗ್ರಾಮೀಣ ಪ್ರದೇಶದಿಂದ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ತಾಲೂಕು ಆಸ್ಪತ್ರೆಗೆ ಟ್ರಯಾಜ್‌ಗೆ ಕರೆದುಕೊಂಡು ಹೋಗಲು ಬಳಸುತ್ತಿದ್ದೇವೆ. ಇದೇ ರೀತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ಫೋರ್ಸ್ ಮೂಲಕ ರೋಗಿಗಳನ್ನು ಕರೆ ತರಲು ಹಾಗೂ ಹೋಂ ಐಸೋಲೇಷನ್‌ನಲ್ಲಿರುವವರ ಚಿಕಿತ್ಸೆಗಾಗಿ ನಾಲ್ಕು ವಾಹನ ಬಳಸಲಾಗುತ್ತಿದೆ. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸಿ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರಸ್ತುತ ನಮ್ಮಲ್ಲಿ ಆಕ್ಸಿಜನ್ ಪ್ಲಾಂಟ್ ಇರುವುದಿಲ್ಲ. ಇಲ್ಲಿಯೇ ಆಕ್ಸಿಜನ್ ಪ್ಲಾಂಟ್ ಇದ್ದರೆ ನಾವು ಇನ್ನಷ್ಟು ಸೇವೆ ನೀಡಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಟೆಲಿಮೆಡಿಸಿನ್ ಸೌಲಭ್ಯ ಆರಂಭಿಸಲಾಗಿದ್ದು, ಮೂರು ಮಂದಿ ವೈದ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಂ ಐಸೋಲೇಷನ್‌ನಲ್ಲಿರುವವರು ಇದರ ಸೌಲಭ್ಯವನ್ನು ಗರಿಷ್ಟವಾಗಿ ಬಳಸುತ್ತಿದ್ದು, ರೋಗ ಲಕ್ಷಣಗಳಿಗೆ ಫೋನ್ ಮೂಲಕ ವೈದ್ಯರ ನೆರವು ಪಡೆಯಲು ಇದರಿಂದ ಸಾಧ್ಯವಾಗಿದೆ. ಇದೀಗ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡುತ್ತಿದ್ದು, ಇದೀಗ ಎರಡನೇ ಲಸಿಕೆಯನ್ನು ಮಾತ್ರ ನೀಡುತ್ತಿದ್ದೇವೆ. 18-45 ವರ್ಷದವರಿಗೆ ಪ್ರಸ್ತುತ ಲಸಿಕೆಯನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾ.ಗಣೇಶ್ ಭಟ್ ಅವರು ಹೇಳಿದರು.

ವೈದ್ಯರ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಎರಡನೇ ಅಲೆ ನಿರೀಕ್ಷೆಗೂ ಮೀರಿ ತೀವ್ರಗೊಂಡಿದೆ. ಇದರಿಂದಾಗಿ ಆಸ್ಪತೆಗಳ ಮೆಲೆ ವೈದ್ಯರ ಮೇಲೆ ಕಾರ್ಯದ ಒತ್ತಡ ಹೆಚ್ಚಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಮಾನವೀಯತೆಯ ನೆಲೆಯಲ್ಲಿ ನೀವೆಲ್ಲರೂ ಸಮರ್ಥವಾಗಿ ಎದುರಿಸುತ್ತಿದ್ದೀರಿ. ಜನರ ಜೀವ ಉಳಿಸುವುದರೊಂದಿಗೆ, ಚಿಕಿತ್ಸಾ ಸೌಲಭ್ಯಗಳು, ಔಷಧಿಗಳು, ಮಾನವ ಸಂಪನ್ಮೂಲಗಳ ಪಾರದರ್ಶಕ ಹಾಗೂ ದಕ್ಷ ಬಳಕೆಗೂ ಆದ್ಯತೆ ನೀಡಬೇಕಾಗಿದೆ. ಸೋಂಕಿನಿಂದ ತಮಗಿರುವ ಅಪಾಯವನ್ನು ಲೆಕ್ಕಿಸದೆ , ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ಗಳು ಮತ್ತಿತರ ಎಲ್ಲಾ ಆರೋಗ್ಯ ಕಾರ್ಯಕರ್ತರು ನಾಡಿನ ಅಮೂಲ್ಯ ಆಸ್ತಿ. ಸರ್ಕಾರ ಸದಾ ನಿಮ್ಮೊಂದಿಗೆ, ನಿಮ್ಮ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...