alex Certify ಪ್ರವಾಸೋದ್ಯಮ ದೃಷ್ಟಿಯಿಂದ ಶಿವಶರಣರ ಕ್ಷೇತ್ರ ಅಭಿವೃದ್ಧಿ: ಸಚಿವ ಮಧು ಬಂಗಾರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸೋದ್ಯಮ ದೃಷ್ಟಿಯಿಂದ ಶಿವಶರಣರ ಕ್ಷೇತ್ರ ಅಭಿವೃದ್ಧಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: 12ನೇ ಶತಮಾನದ ಶಿವಶರಣ ಅಲ್ಲಮ ಪ್ರಭುಗಳ ತತ್ವ ಆದರ್ಶ, ವಚನ ಸಾಹಿತ್ಯವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೂ ಮಾರ್ಗದರ್ಶನ ನೀಡುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಬೆಕ್ಕಿನ ಕಲ್ಮಠದಲ್ಲಿ ಪರಮ ತಪಸ್ವಿ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನ, 532ನೇ ಮಾಸಿಕ ಶಿವಾನುಭವಗೋಷ್ಠಿ, ಅಲ್ಲಮ ಪ್ರಭು, ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶಿವಶರಣರ ವಚನ ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾನು ಸಹ ನನ್ನ ಜೀವನದಲ್ಲಿ ವಚನ ಸಾಹಿತ್ಯ ಮೌಲ್ಯಗಳನ್ನು ಅನುಷ್ಠಾನ ಮಾಡಲು ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇನೆ. ಅಲ್ಲಮಪ್ರಭು ಜನ್ಮ ಸ್ಥಳ ಸೇರಿದಂತೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಶಿವಶರಣರ ಕ್ಷೇತ್ರಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲು ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸುತ್ತೇನೆ. ಎಲ್ಲ ಗುರುಗಳ ಮಾರ್ಗದರ್ಶನದಿಂದ ಉತ್ತಮ ಕೆಲಸ ಮಾಡುತ್ತೇನೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕವಿ, ಚಿಂತಕ ಡಾ. ಕುಮಾರ ಚಲ್ಯ ಮಾತನಾಡಿ, ವಚನ ಸಾಹಿತ್ಯ ಹಾಗೂ ಶರಣ ತತ್ವ ಸಂದೇಶಗಳ ಪ್ರಸಾರ ಕಾರ್ಯದಲ್ಲಿ ಜೀವನ ನಡೆಸಿದ, ಸದ್ಗುಣಗಳನ್ನು ಹೊಂದಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಶ್ರೇಷ್ಠ ಸಂಗತಿ. ಇದೊಂದು ಗುಣ ಗೌರವ ಸಮಾರಂಭ ಆಗಿದೆ ಎಂದು ಹೇಳಿದರು.

365 ವಚನಗಳನ್ನು ವ್ಯಾಖ್ಯಾನಿಸಿ ಎಲ್ಲ ವಚನಗಳನ್ನು ಸಂಗ್ರಹಿಸಿ “ವಚನ ವರ್ಷ” ಕೃತಿ ಹೊರತಂದಿರುವ ಬಸವರಾಜ ಸಾದರ ಹಾಗೂ ಅಕ್ಕಮಹಾದೇವಿ ವಚನ, ಕಾಲಘಟ್ಟ ಕುರಿತು ಸಂಶೋಧನಾ ನಡೆಸಿರುವ ಶಾಂತಕುಮಾರಿ ಇಮ್ರಾಪುರ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ. ಶರಣ ಸಾಹಿತ್ಯ ಕ್ಷೇತ್ರಕ್ಕೆ ಸನ್ಮಾನಿತ ವ್ಯಕ್ತಿಗಳು ನೀಡಿರುವ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಬೆಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ ಅವರಿಗೆ “ಅಲ್ಲಮ ಪ್ರಭು ಪ್ರಶಸ್ತಿ” ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕಿ ಡಾ. ಶಾಂತಕುಮಾರಿ ಇಮ್ರಾಪುರ ಅವರಿಗೆ “ಅಕ್ಕಮಹಾದೇವಿ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್, ಯುಎಇ ಬಸವ ಸಮಿತಿ ಸ್ಥಾಪಕ ಚಂದ್ರಶೇಖರ ಲಿಂಗದಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕಿ ಸುಮಾ ಹೆಗಡೆ, ಆಕಾಶವಾಣಿ ಕಲಾವಿದೆ ನಾಗರತ್ನಮ್ಮ ಚಂದ್ರಶೇಖರಯ್ಯ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 112 ಜನರು ಸಮೂಹ ವಚನ ಗಾಯನ ನಡೆಸಿಕೊಟ್ಟರು. ಶ್ರೀ ವಿಜಯ ಕಲಾನಿಕೇತನ ವೃಂದವು ವಚನ ನೃತ್ಯ ನಡೆಸಿಕೊಟ್ಟಿತು.

ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಮಹಾಸಂಸ್ಥಾನ ಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ‌ಡಿ.ಎಸ್.ಅರುಣ್, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಡಾ. ವಿಜಯಾದೇವಿ, ಪರಮ ತಪಸ್ವಿ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 112ನೇ ಪುಣ್ಯ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಎಚ್.ಸಿ.ಯೋಗೀಶ್, ಪ್ರಧಾನ ಕಾರ್ಯದರ್ಶಿ ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ಕೋಶಾಧ್ಯಕ್ಷ ಇ.ವಿಶ್ವಾಸ್, ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಚಾರ ಸಮಿತಿ ಅಧ್ಯಕ್ಷ ಸೋಮನಾಥ್.ಕೆ.ಆರ್., ಶೀಲಾ ಸುರೇಶ್, ಸಂತೋಷ್ ಬಳ್ಳೇಕೆರೆ, ರುದ್ರಯ್ಯ ಶಾಸ್ತ್ರಿ, ಶಾಂತಾ ಆನಂದ್ ಮತ್ತಿತರರು ಹಾಜರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...