alex Certify ಆತ್ಮಹತ್ಯೆಗೆ ಯತ್ನಿಸಿದ್ದ ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್​​ಗೆ ICUನಲ್ಲಿ ಚಿಕಿತ್ಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಯತ್ನಿಸಿದ್ದ ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್​​ಗೆ ICUನಲ್ಲಿ ಚಿಕಿತ್ಸೆ

ಆತ್ಮಹತ್ಯೆಗೆ ಯತ್ನಿಸಿದ್ದ ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್​ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಡಿಸಿಪಿ ಅತುಲ್​ ಠಾಕೂರ್​ ಈ ವಿಚಾರವಾಗಿ ಮಾಹಿತಿ ನೀಡಿದ್ದು, ಗುರುವಾರ ರಾತ್ರಿ 11.15ರ ಸುಮಾರಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಕಾಂತಾ ಪ್ರಸಾದ್​ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ವಿಚಾರ ನಮಗೆ ತಿಳಿಯಿತು. ಕೂಡಲೇ ಪೊಲೀಸ್​ ಅಧಿಕಾರಿಯೊಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ಸಂಬಂಧ ಮಾಹಿತಿಯನ್ನ ಕಲೆ ಹಾಕಿದ್ರು. ವೈದ್ಯರು ಒದಗಿಸಿರುವ ಮಾಹಿತಿಯ ಪ್ರಕಾರ ಕಾಂತಾ ಪ್ರಸಾದ್​ ಮದ್ಯ ಹಾಗೂ ನಿದ್ದೆ ಮಾತ್ರೆಯನ್ನ ಸೇವಿಸಿದ್ದು ಈ ಕಾರಣಕ್ಕೆ ಪ್ರಜ್ಞೆ ತಪ್ಪಿದ್ದಾರೆ ಎನ್ನಲಾಗಿದೆ ಎಂದು ಹೇಳಿದ್ರು. ಇನ್ನು ಪ್ರಸಾದ್​ ಪುತ್ರ ಕೂಡ ಇದೇ ಹೇಳಿಕೆಯನ್ನ ನೀಡಿದ್ದಾರೆ.

ಶುಕ್ರವಾರ ಈ ವಿಚಾರವಾಗಿ ಮಾತನಾಡಿದ್ದ ಕಾಂತಾ ಪ್ರಸಾದ್​ ಪುತ್ರ ಕರಣ್​, ನಮ್ಮ ತಂದೆ ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಸಿಂಪಥಿ ಗಳಿಸಿದ್ದ ನಮ್ಮ ತಂದೆ ಕ್ರಮೇಣ ವಿವಾದಕ್ಕೆ ಒಳಗಾಗಿದ್ದರು. ಉದ್ಯಮದಲ್ಲೂ ನಷ್ಟ ಉಂಟಾಗಿದ್ದರ ಹಿನ್ನೆಲೆ ತಂದೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಸಂಜೆ 3.30ರ ಸುಮಾರಿಗೆ ತಂದೆಯ ಆರೋಗ್ಯ ಇನ್ನಷ್ಟು ಬಿಗಡಾಯಿಸಿದ್ದರಿಂದ ಅವರನ್ನ ಐಸಿಯುಗೆ ದಾಖಲು ಮಾಡಲಾಯ್ತು ಎಂದು ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್​ನಲ್ಲಿ ಕಾಂತಾ ಪ್ರಸಾದ್​ ಹಾಗೂ ಬಾದಾಮಿ ದೇವಿ ಬಾಬಾ ಕಾ ಡಾಬಾದಲ್ಲಿ ಉದ್ಯಮವೇ ಆಗ್ತಿಲ್ಲ ಎಂದು ಕಣ್ಣೀರು ಹಾಕಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದಾದ ಬಳಿಕ ಇವರ ಡಾಬಾಗೆ ಜನ ಸಾಗರವೇ ಹರಿದು ಬಂದಿತ್ತು. ಅನೇಕರು ಸಹಾಯಧನವನ್ನೂ ನೀಡಿದ್ದರು. ಅಲ್ಲದೇ ಈ ದಂಪತಿಗೆ ಉಚಿತ ಕಣ್ಣಿನ ಚಿಕಿತ್ಸೆಯನ್ನೂ ಮಾಡಿಸಿಕೊಟ್ಟಿದ್ದರು.

ಆದರೆ ನವೆಂಬರ್​ ತಿಂಗಳಲ್ಲಿ ಇವರ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದ ಗೌರವ್​ ವಾಸನ್​ ವಿರುದ್ಧವೇ ಕಾಂತಾ ಪ್ರಸಾದ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ಬಳಿಕ ಪರಿಸ್ಥಿತಿ ಬದಲಾಗಿತ್ತು. ತಮಗೆ ದಾರಿ ತೋರಿದವನ ವಿರುದ್ಧವೇ ದೂರು ನೀಡಿದ್ದ ಕಾಂತಾ ಪ್ರಸಾದ್​ ನಡೆ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಾದ ಬಳಿಕ ಕಳೆದ ವರ್ಷ ಡಿಸೆಂಬರ್​ನಲ್ಲಿ ಪ್ರಸಾದ್​ ರೆಸ್ಟಾರೆಂಟ್​ ಒಂದನ್ನ ತೆರೆದಿದ್ದರು. ಆದರೆ ಈ ಉದ್ಯಮದಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ್ದ ಕಾಂತಾ ಪ್ರಸಾದ್​ ಬಾಬಾ ಕಾ ಡಾಬಾಗೆ ವಾಪಸ್ಸಾಗಿದ್ದರು. ಇದಾದ ಬಳಿಕ ಕಾಂತಾ ಪ್ರಸಾದ್​ ವಾಸನ್​ ಬಳಿಯಲ್ಲಿ ಕ್ಷಮೆ ಕೂಡ ಕೇಳಿದ್ದರು. ಗೌರವ್​ ಕೂಡ ನಾನು ಪ್ರಸಾದ್​ರನ್ನ ಕ್ಷಮಿಸಿದ್ದೇನೆ ಹಾಗೂ ಅವರನ್ನ ಭೇಟಿ ಮಾಡಿದ್ದೇನೆ ಎಂದೂ ಹೇಳಿದ್ದರು. ಕಾಂತಾ ಪ್ರಸಾದ್​ಗೆ ರೆಸ್ಟಾರೆಂಟ್​ ತೆರೆಯಲು ಸಹಾಯ ಮಾಡಿದ್ದ ತುಷಾಂತ್​ ಅದ್ಲಾಕಾ ನಡುವೆ ಕೂಡ ವಿವಾದ ಏರ್ಪಟ್ಟಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...