ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರಿಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ. ಎಂಎಲ್ಸಿ ಸಿ.ಎಂ. ಇಬ್ರಾಹಿಂರ ವಿಡಿಯೋವನ್ನೇ ಶೇರ್ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್ ನುಡಿದಂತೆ ನಡೆದಿದ್ಯಾ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.
ವಿಡಿಯೋದಲ್ಲಿ ಸಿ.ಎಂ ಇಬ್ರಾಹಿಂ,‘ 18 ಪ್ರತಿಶತ ಅಲ್ಪಸಂಖ್ಯಾತರಿದ್ದೇವೆ. ಸ್ವಾತಂತ್ರ್ಯ ಬಂದು 73 ವರ್ಷಗಳೇ ಕಳೆದರೂ ಒಬ್ಬನೇ ಒಬ್ಬ ಅಲ್ಪಸಂಖ್ಯಾತ ಪಿಸಿಸಿ ಅಧ್ಯಕ್ಷನಾಗಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಆಗೋದು ಹಾಗಿರಲಿ. ಕನಿಷ್ಟ ಡಿಸಿಎಂ ಕೂಡ ಆಗಿಲ್ಲ. ಸೋತ ಪರಮೇಶ್ವರ್ರನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿ ಅವರಿಗೆ ಡಿಸಿಎಂ ಸ್ಥಾನ ನೀಡಿದ್ದೀರಿ. ಆದರೆ ಒಬ್ಬ ಅಲ್ಪಸಂಖ್ಯಾತನಿಗೆ ಈ ಸ್ಥಾನವನ್ನ ನೀಡಿಲ್ಲ’ ಎಂದು ಹೇಳಿದ್ದಾರೆ.
ಈ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಬಿಜೆಪಿ, ದಶಕಗಳಿಂದ ಅಲ್ಪಸಂಖ್ಯಾತರ ಮುಂಗೈಗೆ ಬೆಲ್ಲ ಸವರುತ್ತಲೇ ಬಂದ ಕಾಂಗ್ರೆಸ್ಸಿಗರೇ, ಸಿ.ಎಂ.ಇಬ್ರಾಹಿಂ ಅವರ ಈ ಪ್ರಶ್ನೆಗೆ ನಿಮ್ಮ ಉತ್ತರವೇನು? ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮೇಲೆ ಹೊಂದಿರುವ ಪ್ರೀತಿಯ ನಿಜ ಬಣ್ಣವನ್ನು ಇಬ್ರಾಹಿಂ ಬೆತ್ತಲಾಗಿಸಿದ್ದಾರೆ ಎಂದು ಲೇವಡಿ ಮಾಡಿದೆ.