ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮುಷ್ಕರ ತೀವ್ರಗೊಂಡ ಹಿನ್ನೆಲೆಯಲ್ಲಿ ಯೂನಿಯನ್ ಮುಖಂಡರ ಜೊತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕರೆದಿದ್ದ ಸಭೆ ಇದೀಗ ಅರ್ಧಕ್ಕೆ ಸ್ಥಗಿತಗೊಂಡಿದೆ.
ಸಾರಿಗೆ ನೌಕರರ ಮುಷ್ಕರ ಹಿಂಪಡೆಯುವಂತೆ ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಯೂನಿಯನ್ ಮುಖಂಡರ ಜೊತೆ ಇಂದು ಸಚಿವ ಲಕ್ಷ್ಮಣ ಸವದಿ ಸಭೆ ನಡೆಸಿದ್ದರು. ಸಭೆಯಲ್ಲಿ ಮುಷ್ಕರಕ್ಕೆ ಕರೆಕೊಟ್ಟವರನ್ನು ಕರೆದು ನೀವು ಚರ್ಚೆ ನಡೆಸಿ. ನಾವ್ಯಾರೂ ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿಲ್ಲ ಎಂದು ಯೂನಿಯನ್ ಮುಖಂಡರು ಸಚಿವರಿಗೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಭೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಸಭೆಯಿಂದಲೇ ಎದ್ದು ನಡೆದಿದ್ದಾರೆ ಎನ್ನಲಾಗಿದೆ.
ಸಾರಿಗೆ ನೌಕರರು, ಸಾರಿಗೆ ನೌಕರರ ಹೋರಾಟ ಸಂಘದ ಗೌರಾವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಕೋಡಿಹಳ್ಳಿ ಜೊತೆ ಸಭೆ ನಡೆಸಲು ಸಚಿವರು ನಿರಾಕರಿಸಿದ್ದಾರೆ. ಅಲ್ಲದೇ ನಿನ್ನೆ ಸಿಎಂ ಯಡಿಯೂರಪ್ಪ ಕೂಡ ಕೋಡಿಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಹಾಗೂ ಸರ್ಕಾರದ ನಡುವೆ ಪ್ರತಿಷ್ಠೆಯ ಪ್ರಶ್ನೆ ಆರಂಭವಾಗಿದ್ದು, ಸಾರಿಗೆ ನೌಕರರು ವರ್ಸಸ್ ಸರ್ಕಾರ ಎಂಬಂತಾಗಿದೆ.