ಬೆಂಗಳೂರು: ಆರ್ ಎಸ್ ಎಸ್ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿವಾದಾತ್ಮಕ ವಾಗ್ದಾಳಿಗೆ ಕಾರಣವಾಗಿದೆ. ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರ್ ಎಸ್ ಎಸ್ ಈ ದೇಶದ ನಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು ಎಂದು ಕೆಪಿಸಿಸಿ ಕಿಡಿ ಕಾರಿದೆ.
ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುತ್ತಾ ಬ್ರಿಟೀಷರ ಸೈನ್ಯ ಸೇರಲು RSS ತುದಿಗಾಲಲ್ಲಿ ನಿಂತಿರಲಿಲ್ಲವೇ? ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರಿಗೆ ಹಿಡಿದುಕೊಡುತ್ತಿದ್ದ RSS ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು? ಎಂದು ಸರಣಿ ಟ್ವೀಟ್ ಮೂಲಕ ಕೆಪಿಸಿಸಿ ಪ್ರಶ್ನಿಸಿದೆ.
RSS ಈ ದೇಶಕ್ಕೆ ದ್ರೋಹ ಬಗೆದ ಸಂಘಟನೆ ಎಂಬುದಕ್ಕೆ ಒಂದಷ್ಟು ನಿದರ್ಶನಗಳನ್ನು ನೀಡುತ್ತೇವೆ ಎಂದು ವಿವರಿಸಿರುವ ಕೆಪಿಸಿಸಿ, 1929 ರ ಲಾಹೋರ್ ಅಧಿವೇಶನದಲ್ಲಿ ಅಂದಿನ ಅಧ್ಯಕ್ಷರಾದ ಜವಾಹರಲಾಲ್ ನೆಹರೂರವರು ದೇಶದ ಎಲ್ಲಾ ಸಂಸ್ಥೆಗಳ ಮೇಲೆ 1930 ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆಕೊಡುತ್ತಾರೆ ಇದನ್ನು ನಿರಾಕರಿಸಿದ RSS ತನ್ನ ಸಂಘದ ಕಛೇರಿಯ ಮೇಲೆ ಭಗವಾಧ್ವಜ ಹಾರಿಸುತ್ತದೆ.
ಅಷ್ಟೇ ಅಲ್ಲ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಾ 3 ಬಣ್ಣಗಳುಳ್ಳ ಧ್ವಜ ಅನಿಷ್ಟದ ಸಂಕೇತ ಎಂದು RSS ತನ್ನ ಮುಖವಾಣಿ “ಆರ್ಗನೈಸರ್” ಅಲ್ಲಿ ಬರೆಯುತ್ತದೆ. 55 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಗೌರವ ನೀಡದೆ ತನ್ನ ಸಂಘದ ಕಛೇರಿಯ ಮೇಲೆ ತ್ರಿವರ್ಣ ಧ್ವಜದ ಬದಲಾಗಿ ಭಗವಾಧ್ವಜ ಹಾರಿಸುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದಂಥಹ ಈ ದೇಶದ ಮೊದಲ ಭಯೋತ್ಪಾದಕ ಗೋಡ್ಸೆ ತಯಾರಾಗಿದ್ದು ಸಹ ಇದೇ RSS ಗರಡಿಯಲ್ಲೇ. ಈ ಬಗ್ಗೆ ನಾಥೂರಾಮ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಜನವರಿ 28 1994ರಲ್ಲಿ ಫ್ರಂಟ್ ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಖಚಿತಪಡಿಸಿದ್ದಾನೆ ಎಂದು ತಿಳಿಸಿದೆ.
ನಾವು ಮೂರು ಜನ ಸಹೋದರರು ಅಂದರೆ ನಾಥೂರಾಮ, ನಾನು, ದತ್ತಾತ್ರೇಯ. ನಾವು ಮನೆಯಲ್ಲಿ ಬೆಳೆದೆವು ಎಂಬುದಕ್ಕಿಂತ RSS ಸಂಘಟನೆಯಲ್ಲೇ ಬೆಳೆದವು ಎಂದು ಹೇಳಬಹುದು. ಇದು ಗೋಪಾಲ ಗೋಡ್ಸೆಯ ಮಾತುಗಳು. ಈ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಬಾಪೂಜೀ ಮಹಾತ್ಮ ಗಾಂಧಿಯವರು ಸತ್ತ ದಿನ ಸಿಹಿ ಹಂಚಿದ ಗುಳ್ಳೆನರಿ RSS ಹೇಗೆ ತಾನೇ ದೇಶಪ್ರೇಮಿ ಸಂಘಟನೆಯಾಗಬಲ್ಲದು? RSS ಮುಖವಾಣಿ ಆರ್ಗನೈಸರ್ 1970 ಜನವರಿ 11 ರಂದು ತನ್ನ ಸಂಪಾದಕೀಯದಲ್ಲಿ ಗಾಂಧಿಯವರ ಬಗ್ಗೆ ವಿಷಪೂರಿತ ಲೇಖನ ಪ್ರಕಟಿಸಿರಲಿಲ್ಲವೇ? ಎಂದು ಪ್ರಶ್ನಿಸಿದೆ.