ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಲು ಹೋಗಿ ಸಿ.ಟಿ.ರವಿಯವರು ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಸಿ.ಟಿ.ರವಿಯನ್ನು ಚಿಕ್ಕಮಗಳೂರಿನಲ್ಲಿ ‘ಲೂಟಿ ರವಿ’ ಎನ್ನುತ್ತಾರೆ. ಹಾಗಂತ ನಾನು ಹೇಳುತ್ತಿರುವುದಲ್ಲ ಅಲ್ಲಿನ ಜನ ಕರೆಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಬಿಜೆಪಿ ನಾಯಕ ಸಿ.ಟಿ.ರವಿ, ಇಂತಹ ಮಾತುಗಳು ಓರ್ವ ವಿಪಕ್ಷ ನಾಯಕನಿಗೆ ಹಾಗೂ ಮಾಜಿ ಮುಖ್ಯಮಂತ್ರಿಯಾಗಿ ಶೋಭೆ ತರುವುದಿಲ್ಲ ಎಂದರು.
ಈಗ ಅವರ ಮಾತಿಗೆ ನಾನೂ ಹೇಳಬಹುದು. ಸಿದ್ದರಾಮಯ್ಯನವರನ್ನು ಮೈಸೂರಿನಲ್ಲಿ ಕಚ್ಚೆಹರಕ ಎಂದು ಕರೆಯುತ್ತಾರೆ. ಈ ಮಾತನ್ನು ನಾನು ಹೇಳುತ್ತಿಲ್ಲ, ಅಲ್ಲಿನ ಜನ ಹೇಳುತ್ತಾರೆ ಎಂದು ಹೇಳಬಹುದು. ಇಂತಹ ಮಾತು ಹೇಳಿದರೆ ಅವರಿಗೆ ಮರ್ಯಾದೆ ಇರುತ್ತಾ? ಹಾಗಾಗಿ ಸಿದ್ದರಾಮಯ್ಯ ಸ್ವಲ್ಪ ಜವಾಬ್ದಾರಿಯುತವಾಗಿ ಮಾತನಾಡಬೇಕು. ಇಂತಹ ಕೀಳುಮಟ್ಟದ ಪದಪ್ರಯೋಗ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.