ಬೆಂಗಳೂರು: ಪ್ರತಿಭಟನಾನಿರತ ವಿದ್ಯಾರ್ಥಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದ್ದು, ಪ್ರತಿಭಟನೆ ವೇಳೆ ಆತ ಮೃತಪಟ್ಟಿಲ್ಲ ಎಂದು ತಿಳಿಸಿದೆ.
ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಅಭಿಜಿತ್ ಸಾವು ದುರದೃಷ್ಟಕರ ಸಂಗತಿ. ಫೆ.23 ಹಾಗೂ 24ರ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಭಾಗವಹಿಸಿರಲಿಲ್ಲ. ಆತ ಉಪವಾಸ ಸತ್ಯಾಗ್ರಹದ ವೇಳೆ ಮೃತಪಟ್ಟಿಲ್ಲ. ಕಾಲೇಜು ವಾರ್ಷಿಕ ಉತ್ಸವದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿಸಿದೆ.
ವಾರ್ಷಿಕ ಉತ್ಸವದ ವೇಳೆ ವಿದ್ಯಾರ್ಥಿ ಅಭಿಜಿತ್ ಕುಸಿದು ಬಿದ್ದಿದ್ದಾನೆ. ನಾವು ತಕ್ಷಣ ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಸಾವು ನಮಗೂ ನೋವು ತಂದಿದೆ ಎಂದು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ.
ಅಜೀಂ ಪ್ರೇಮ್ ಜಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ 12 ದಿನಗಳಿಂದ ವಿವಿ ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಆಡಳಿತ ಮಂಡಳಿ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸದ ಕಾರಣ ವಿದ್ಯಾರ್ಥಿಗಳು ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಆದರೆ ವಿವಿ ಇದನ್ನು ನಿರಾಕರಿಸಿದೆ.