ರಾಮನಗರ: ಬಜೆಟ್ ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ರಾಮನಗರದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್,ಡಿ.ಕುಮಾರಸ್ವಾಮಿ, ಅವರು ರಾಮ ಮಂದಿರಕ್ಕೆ ಅಡಿಗಲ್ಲು ಹಾಕಲಿ, ಮಂದಿರ ನಿರ್ಮಾಣ ಮಾಡುವುದು ಮಾತ್ರ ನಾನು ಎಂದು ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಮ ಮಂದಿರ ಜವಾಬ್ದಾರಿ ನನ್ನ ಮೇಲೆ ಬರಲಿದೆ. ಕಾರಣ ಮುಂದೆ ಯಾರ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂಬುದು ನನಗೆ ಗೊತ್ತು. ಅವರು ಮಂದಿರಕ್ಕೆ ಅಡಿಗಲ್ಲು ಹಾಕಲಿ, ಮಂದಿರ ನಿರ್ಮಾಣ ನಾನು ಮಾಡುತ್ತೇನೆ ಎನ್ನುವ ಮೂಲಕ ಈ ಬಾರಿ ಚುನಾವಣೆಯಲ್ಲಿ ಗೆದ್ದು ತಾವು ಮುಖ್ಯಮಂತ್ರಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ರಾಮ ಮಂದಿರ ನಿರ್ಮಾಣದ ಬಗ್ಗೆ ಘೋಷಣೆ ಮಾಡಿದ್ದಾರೆ ಅಷ್ಟೇ. ನಾಳೆ ಬೆಳಿಗ್ಗೆಯೇ ಮಂದಿರ ನಿರ್ಮಿಸಲು ಆಗಲ್ಲ, ಮುಂದಿನ ಸರ್ಕಾರ ಬಂದ ಮೇಲೆ ಮಂದಿರ ಕಟ್ಟಿಬೇಕು. ಮುಂದೆ ಬಿಜೆಪಿ ಸರ್ಕಾರ ಬರಲ್ಲ, ನನ್ನ ನೇತೃತ್ವದ ಸರ್ಕಾರ ಬರಲಿದೆ. ಹಾಗಾಗಿ ಮಂದಿರ ನಿರ್ಮಾಣ ಮಾಡುವ ಜವಾಬ್ದಾರಿ ನನಗೆ ಬರಲಿದೆ ಎಂದು ಹೇಳಿದರು.
ಬಿಜೆಪಿಯವರು ಧಾರ್ಮಿಕ ವಿಚಾರ ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಅವರಿಗೆ ಬೇರೆ ಮಾರ್ಗವಿಲ್ಲ, ಮೂರು ವರ್ಷಗಳ ಹಿಂದೆಯೇ ರಾಮ ಮಂದಿರ ನಿರ್ಮಾಣ ಘೋಷಣೆ ಮಾಡಿದ್ದರೆ ಮೆಚ್ಚಿಕೊಳ್ಳಬಹುದಿತ್ತು. ಆದರೆ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಘೋಷಣೆ ಮಾಡಿದರೆ ಏನು ಮಾಡಲು ಸಾಧ್ಯ. ಇದಕ್ಕಾಗಿ ಹಣ ಎಷ್ಟು ಇಟ್ಟಿದ್ದಾರೆ? ಜಾಗದ ಅನುಮತಿ ಸಿಕ್ಕಿದೆಯೇ? ಮಂದಿರ ನಿರ್ಮಾಣ ವಿಚಾರದಲ್ಲಿ ಕೆಲ ಕಾನೂನುಗಳು ಇದೆ ಎಂದು ಹೇಳಿದರು.