ಶಿವಮೊಗ್ಗ: ಚಿತ್ರದುರ್ಗ ಮುರುಘಾ ಶ್ರೀಗಳ ಕೊರೋನರಿ ಆಂಜಿಯೋಗ್ರಾಂ ಯಶಸ್ವಿಯಾಗಿದೆ ಎಂದು ಸಿಮ್ಸ್ ನಿರ್ದೇಶಕ ಡಾ. ವಿರುಪಾಕ್ಷಪ್ಪ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋರ್ಟ್ ಸೂಚನೆಯಂತೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಮೆಗ್ಗಾನ್ ವೈದ್ಯರ ತಂಡ ಅಗತ್ಯ ಪರೀಕ್ಷೆಗಳ ಜೊತೆ ಶ್ರೀಗಳ ದೈಹಿಕ ಕ್ಷಮತೆ ಗಮನಿಸಿತ್ತು ಎಂದರು.
ಇಂದು ಬೆಳಿಗ್ಗೆ 10.45 ರಿಂದ ಆ್ಯಂಜಿಯೋಗ್ರಾಮ್ ಮಾಡಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ಹೃದಯ ತಜ್ಞರಾದ ಡಾ. ಮಹೇಶ್ ಮೂರ್ತಿ, ಡಾ. ಪರಮೇಶ್ವರ್ ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. 24 ಗಂಟೆಗಳ ಕಾಲ ತೀವ್ರ ನಿಗಾದಲ್ಲಿ ಇಟ್ಟಿದ್ದೇವೆ. ಚಿಕಿತ್ಸೆ ಬಳಿಕ ಶ್ರೀಗಳ ಬಿಪಿ, ಸ್ಯಾಚುರೇಶನ್ ಎಲ್ಲವೂ ನಾರ್ಮಲ್ ಅಗಿದೆ ಎಂದು ಮಾಹಿತಿ ನೀಡಿದರು.
ಆಂಜಿಯೋಗ್ರಾಂ ಮಾಡುವ ಮುನ್ನ ಜೈಲಾಧಿಕಾರಿ ಪರ್ಮಿಶನ್ ತೆಗೆದುಕೊಳ್ಳಲಾಗಿತ್ತು. ಯಶಸ್ವಿಯಾದ ಬಳಿಕವೂ ಅವರಿಗೆ ಮಾಹಿತಿ ನೀಡಲಾಗಿದೆ. ಶ್ರೀಗಳ ಆರೋಗ್ಯ ಸ್ಥಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಶ್ರೀಗಳಿಗೆ ಎಲ್ಲಾ ಅಗತ್ಯ ಪರೀಕ್ಷೆ ನಡೆಸಲಾಗಿದೆ. ಸ್ವಾಮೀಜಿಗಳು ಚೆನ್ನಾಗಿದ್ದಾರೆ. ಸ್ವಾಮೀಜಿಗಳಿಗೆ ಯಾವುದೇ ತೊಂದರೆ ಇಲ್ಲ. ನಾರ್ಮಲ್ ಇದ್ದಾರೆ ಎಂದು ತಿಳಿಸಿದರು.