ಬರೋಬ್ಬರಿ 29 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಬಿಹಾರದ ಭೋಜ್ಪುರ ಜಿಲ್ಲೆಯ ಪೊಲೀಸ್ ಠಾಣೆಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದ್ದ ಹನುಮಂತನ ವಿಗ್ರಹವನ್ನು ಕೊನೆಗೂ ಹೊರಕ್ಕೆ ತರಲಾಗಿದೆ.
ಸುದೀರ್ಘ ಕಾನೂನು ಪ್ರಕ್ರಿಯೆಯ ನಂತರ ವಿಗ್ರಹವನ್ನು ದೇಗುಲದಲ್ಲಿಡುವಂತೆ ಬಿಹಾರ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣವು ಮೇ 29, 1994 ರಂದು ಘಟಿಸಿದ್ದು. ಬರ್ಹರಾ ಬ್ಲಾಕ್ನ ಗುಂಡಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ರಂಗನಾಥ ದೇವಾಲಯದಿಂದ ಹನುಮಂತನ ವಿಗ್ರಹ ಮತ್ತು ಅಷ್ಟಧಾತುಗಳಿಂದ ಮಾಡಿದ ಸ್ವಾಮಿಯ ವಿಗ್ರಹಗಳನ್ನು ಕಳವು ಮಾಡಲಾಗಿತ್ತು.
ಇದರ ನಂತರ, ಕೃಷ್ಣಗಢ್ ಒಪಿಯಲ್ಲಿರುವ ಅಂದಿನ ದೇವಾಲಯದ ಅರ್ಚಕ ಜ್ಞಾನೇಶ್ವರ್ ದ್ವಿವೇದಿ ಅವರು ವಿಗ್ರಹ ಕಳ್ಳತನದ ಆರೋಪದ ಮೇಲೆ ಅಪರಿಚಿತ ಕಳ್ಳರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು, ತನಿಖೆಯ ನಂತರ ಪೊಲೀಸರು ಕಳ್ಳತನವಾದ ವಿಗ್ರಹಗಳನ್ನು ಬಾವಿಯಿಂದ ವಶಪಡಿಸಿಕೊಂಡಿದ್ದರು.
ಅಂದಿನಿಂದ ವಿಗ್ರಹಗಳನ್ನು ಆ ಪ್ರದೇಶದ ಪೊಲೀಸ್ ಠಾಣೆಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿತ್ತು.
ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಬೋರ್ಡ್ (BSRTB) ಸಹ ಪಾಟ್ನಾ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದ್ದು, ಎಲ್ಲಾ ವಶಪಡಿಸಿಕೊಂಡ ವಿಗ್ರಹಗಳನ್ನು ಟ್ರಸ್ಟ್ ಗೆ ಹಿಂದಿರುಗಿಸುವಂತೆ ನಿರ್ದೇಶಿಸಲು ಕೋರಿತ್ತು.
ಸುದೀರ್ಘ ಕಾನೂನು ಹೋರಾಟದ ನಂತರ, ನ್ಯಾಯಾಲಯದ ಆದೇಶದ ನಂತರ ಅಂತಿಮವಾಗಿ ವಿಗ್ರಹಗಳನ್ನು ಬಿಡುಗಡೆ ಮಾಡಲಾಯಿತು.
ಅರ್ರಾ ಸಿವಿಲ್ ನ್ಯಾಯಾಲಯದ ಎಡಿಜೆ-3 ಸತೇಂದ್ರ ಸಿಂಗ್ ಬಿಡುಗಡೆ ಆದೇಶದ ನಂತರ, ಭಕ್ತರು ವಿಗ್ರಹಗಳನ್ನು ಪೊಲೀಸ್ ಠಾಣೆಯಿಂದ ಹೊರತೆಗೆಯಲು ಭವ್ಯವಾದ ಮೆರವಣಿಗೆಯನ್ನು ನಡೆಸಿದರು. ಶ್ರೀರಂಗನಾಥ ದೇವಾಲಯದಲ್ಲಿ ಅಷ್ಟಧಾತುವಿನಿಂದ ಮಾಡಿದ ಎರಡೂ ವಿಗ್ರಹಗಳನ್ನು ಪುನಃ ಸ್ಥಾಪಿಸಲಾಗುವುದು.