ಬೆಂಗಳೂರು: ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ವರುಣದೇವನ ಸಿಂಚನವಾಗಿದ್ದು, ವಿಧಾನಸೌಧದ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ.
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಗಳ ಮೇಲೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಬಸವರಾಜ್ ಬೊಮ್ಮಾಯಿ, ಸೂಪರ್ ಸ್ಟಾರ್ ರಜನಿಕಾಂತ್, ನಟ ಜ್ಯೂ.ಎನ್ ಟಿ ಆರ್ ಹಾಗೂ ಸಚಿವರು ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಧಾರಾಕಾರ ಮಳೆ ಪ್ರಾರಂಭವಾಗಿದೆ. ಮಳೆಯಲ್ಲಿಯೇ ನೆನೆಯುತ್ತಾ ಕನ್ನಡ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪದಾನ ಮಾಡಲಾಯಿತು.
ಪುನೀತ್ ಪರವಾಗಿ ಪತ್ನಿ ಅಶ್ವಿನಿ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ, ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಪ್ರಶಸ್ತಿ ನೀಡಿ ಗೌರವಿಸಿದರು. ಭಾವುಕರಾಗಿ ಅಶ್ವಿನಿ ಪ್ರಶಸ್ತಿ ಸ್ವೀಕಾರ ಮಾಡಿದರು.ಇದೇ ವೇಳೆ ನಟ ರಜನಿಕಾಂತ್ ಹಾಗೂ ಜ್ಯೂ.ಎನ್ ಟಿ ಆರ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಪುನೀತ್ ಒಬ್ಬ ರತ್ನ. ಕನ್ನಡದ ರತ್ನನಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನಾನು ನೀಡುತ್ತಿರುವುದು ನನ್ನ ಪುಣ್ಯ ಭಾಗ್ಯ. ಪುನೀತ್ ಗೆ ವರುಣ ದೇವ ಕೂಡ ಆಶಿರ್ವಾದ ಮಾಡಿದ್ದಾನೆ. ಇಡೀ ಕನ್ನಡ ನಾಡು ಪುನೀತ್ ಗಾಗಿ ಕಾಯುತ್ತಿದ್ದು, ಪುನೀತ್ ಮತ್ತೊಮ್ಮೆ ಹುಟ್ಟಿ ಬರಲಿ ಎಂದರು.