alex Certify BIG NEWS: ದ್ವೇಷದ ಭಾಷಣಗಳಿಂದ ದೇಶದ ವಾತಾವರಣಕ್ಕೇ ಆಪತ್ತು; ಸುಪ್ರೀಂ ಕೋರ್ಟ್‌ ಕಳವಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದ್ವೇಷದ ಭಾಷಣಗಳಿಂದ ದೇಶದ ವಾತಾವರಣಕ್ಕೇ ಆಪತ್ತು; ಸುಪ್ರೀಂ ಕೋರ್ಟ್‌ ಕಳವಳ

ದ್ವೇಷಪೂರಿತ ಭಾಷಣಗಳು ಕ್ರಿಮಿನಲ್ ಪಿತೂರಿಯಿಂದ ಕೂಡಿರುತ್ತವೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಹೇಟ್‌ ಸ್ಪೀಚ್‌ಗಳು ದೇಶದ ವಾತಾವರಣವನ್ನು ಕೆಡಿಸುವ ಸಾಧ್ಯತೆ ಇದೆ,  ಹಾಗಾಗಿ  ಅದನ್ನು ನಿಗ್ರಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ದ್ವೇಷದ ಭಾಷಣಗಳಿಂದ ಇಡೀ ವಾತಾವರಣವೇ ಹಾಳಾಗುತ್ತಿದೆ, ಅದನ್ನು ತಡೆಯುವ ಅಗತ್ಯವಿದೆ ಎಂಬ ಅರ್ಜಿದಾರರ ಮನವಿಯ ಹಿಂದೆ ಸಮರ್ಥನೀಯ ಕಾರಣವಿರಬಹುದು. ಆದರೆ ನ್ಯಾಯಾಲಯದ ಗಮನಕ್ಕೆ ತರಲು ವಾಸ್ತವಿಕ ಹಿನ್ನೆಲೆ ಇರಬೇಕು ಎಂಬುದನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್‌ ಅವರು ಗಮನಿಸಿದ್ದಾರೆ.

ಈ ಕುರಿತಂತೆ ಹರ್‌ಪ್ರೀತ್ ಮನ್ಸುಖಾನಿ ಸೈಗಲ್ ಪಿಐಎಲ್‌ ಸಲ್ಲಿಸಿದ್ದರು. ದ್ವೇಷಪೂರಿತ ಭಾಷಣಗಳು, ರಾಜ್ಯ ಪ್ರಾಯೋಜಿತ ಹಿಂಸಾಚಾರ, ಕೇಂದ್ರದ ಏಜೆನ್ಸಿಗಳು ಮತ್ತು ಭಯೋತ್ಪಾದಕ ಗುಂಪುಗಳೊಂದಿಗೆ ಕೈಜೋಡಿಸಿ, ಭಾರತವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುವ ಮತ್ತು ನಾಗರಿಕರನ್ನು ಬಲಿಪಶು ಮಾಡುವ ದೊಡ್ಡ ಪಿತೂರಿ ಎಂದು ಅವರು ಆರೋಪಿಸಿದ್ದಾರೆ.

ಪಿಐಎಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ 42 ಕಕ್ಷಿದಾರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠವು, ಅಕ್ಟೋಬರ್ 31 ರೊಳಗೆ ಪ್ರಶ್ನಾರ್ಹ ಅಪರಾಧ ಮತ್ತು ತನಿಖೆಯ ಸಂದರ್ಭದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಗಳನ್ನು ನೀಡುವ ಹೆಚ್ಚುವರಿ ಅಫಿಡವಿಟ್ ಅನ್ನು ಸಲ್ಲಿಸಲು ಅರ್ಜಿದಾರ ಸೈಗಲ್ ಅವರಿಗೆ ಸೂಚಿಸಿದೆ. ನವೆಂಬರ್‌ 1ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ದ್ವೇಷದ ಭಾಷಣದ ಅಸ್ತ್ರವನ್ನು ಉದ್ದೇಶಪೂರ್ವಕವಾಗಿ ದ್ವೇಷದ ಅಪರಾಧಗಳನ್ನು ಮಾಡಲು, ಬಹುಸಂಖ್ಯಾತ ಹಿಂದೂಗಳಿಗೆ ಅಧಿಕಾರ ನೀಡಲು ಮತ್ತು 2024 ರ ಚುನಾವಣೆಯ ಮೊದಲು ನರಮೇಧ ಮಾಡಲು ಉದ್ದೇಶಪೂರ್ವಕವಾಗಿ ಬಳಸಲಾಗಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ದೂರಿದ್ದಾರೆ.  ಇದನ್ನು ಜಾರಿಗೆ ತರಲು ಅಲ್ಪಸಂಖ್ಯಾತರನ್ನು ಕೊಲ್ಲಲಾಯಿತು, ಪತ್ರಕರ್ತರು ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಕೊಲ್ಲಲಾಯಿತು ಮತ್ತು ದ್ವೇಷದ ಭಾಷಣಗಳು ನಡೆದವು ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...