ಮೈಸೂರು: ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ.ಮಹೇಶ್ ವಾಕ್ಸಮರ ಸಂಧಾನ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದ್ದು, ಹಲವು ಅಧಿಕಾರಿಗಳ ಮೂಲಕವಾಗಿ ರೋಹಿಣಿ ಸಿಂಧೂರಿ ನನ್ನ ಬಳಿ ಸಂಧಾನಕ್ಕೆ ಬಂಧಿದ್ದರು, ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಾ.ರಾ ಮಹೇಶ್, ನಾನು ಅನುಭವಿಸದ ನೋವು ಯಾರೂ ಅನುಭವಿಸಬಾರದು. ಸಿಂಧೂರಿ ವಿರುದ್ಧ ನಾನು ನೀಡಿದ 6 ದೂರುಗಳಲ್ಲಿ ನಾಲ್ಕು ಸಾಬೀತಾಗಿವೆ. ನನಗೆ ಯಾರ ಮೇಲೂ ವೈಯಕ್ತಿಕ ಧ್ವೇಷವಿಲ್ಲ, ನಾನು ಯಾರಿಗೂ ತೊಂದರೆ ಕೊಡುವವನೂ ಅಲ್ಲ. ತಾವು ತಪ್ಪು ಮಾಡಿ ಬೇರೆಯವರ ಮೇಲೆ ಕೆಸರೆರಚುವ ಕೆಲಸ ಆಗಬಾರದು. ಕೆಲ ರಾಜಕಾರಣಿಗಳು, ಅಧಿಕಾರಿಗಳ ಜತೆ ರೋಹಿಣಿ ಸಿಂಧೂರಿ ನನ್ನ ಬಳಿ ಸಂಧಾನ ಮಾತುಕತೆಗೆ ಬಂದಿದ್ದರು. ಅವರು ಕ್ಷಮೆ ಕೇಳಿದ್ದಾರೆ. ತಪ್ಪು ಮಾಹಿತಿಯಿಂದ ಆಗಿದ್ದು ಎಂದಿದ್ದಾರೆ. ಆದರೆ ನನ್ನ ಮೇಲೆ ಕೆಸರು ಎರಚಲು ಯತ್ನಿಸಿದ್ದನ್ನು ನಾನು ಕ್ಷಮಿಸಲಾರೆ. ಆದರೆ ಅವರಲ್ಲಿ ಬದಲಾವಣೆಯಾಗಬೇಕು. ಮುಂದಿನ ಅವರ ಅಧಿಕಾರದ ಅವಧಿಯಲ್ಲಿ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕುವ ಕೆಲಸ ಮಾಡಬಾರದು ಎಂದು ಹೇಳಿದರು.
ನಾನು ಇನ್ಮುಂದೆ ಅವರ ವಿರುದ್ಧ ಯಾವುದೇ ಸಮರ ಸಾರುವುದಿಲ್ಲ, ನನ್ನ ಕರ್ತವ್ಯ ಮಾಡಿಕೊಂಡು ಹೋಗುತ್ತೇನೆ. ಕ್ರಮ ಏನಿದ್ದರೂ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.