ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಸರಿ ಪೇಟ ಹಾಕಲು ಬಂದರೆ ಕಿತ್ತೆಸೆದರು. ಆದರೆ ಟೋಪಿ ಕಂಡರೆ ಸಿದ್ದರಾಮಯ್ಯನವರಿಗೆ ಬಹಳ ಪ್ರೀತಿ ಎಂದು ಕಿಡಿಕಾರಿದ್ದಾರೆ.
ದೇವನಹಳ್ಳಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಸಿ.ಟಿ.ರವಿ, ಈ ಹಿಂದೆ ಕುಂಕುಮ ಇಟ್ಟವರನ್ನು ಕಂಡರೆ ಹೆದರಿಕೆ ಆಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ನಮ್ಮ ತಾಯಂದಿರು ಕುಂಕುಮ ಇಡ್ತಾರೋ ಇಲ್ವೋ? ಕುಂಕುಮ ಇಟ್ಟವರು ಯಾರಾದರೂ ಬಾಂಬ್ ಹಾಕಿದ್ರಾ? ಕೇಸರಿ ಶಾಲು ಹಾಕಿದವರು ಯಾವತ್ತಾದರೂ ಗಲಭೆ ಸೃಷ್ಟಿಸಿದ್ದಾರೆಯೇ? ಟೋಪಿ ಹಾಕಿದವರು ಬಾಂಬ್ ಹಾಕಿದ್ದಾರೆ. ಸಿದ್ದರಾಮಯ್ಯನವರಿಗೆ ಟೋಪಿ ಕಂಡರೆ ಬಹಳ ಪ್ರೀತಿ. ಹಾಗಾಗಿ ಅವರ ಪರವಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲವಿತ್ತು. ಇಗ ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನಿಸಲ್ಲ, ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡುತ್ತೇವೆ. ಯಾರಾದರೂ ಬಾಲ ಬಿಚ್ಚಿದರೆ ಜೆಸಿಬಿ, ಬುಲ್ಡೋಜರ್ ಹೋಗುತ್ತೆ ಎಂದು ಎಚ್ಚರಿಕೆ ನೀಡಿದರು.