ಬಳ್ಳಾರಿ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿಗೆ ಕಾನೂನು ಪದವೀಧರರ ತರಬೇತಿಗಾಗಿ ಅರ್ಹ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಆರ್. ಸುರೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 15 ಆಗಿರುತ್ತದೆ.
ನಿಬಂಧನೆಗಳು
ಅಭ್ಯರ್ಥಿಯು ಬಳ್ಳಾರಿ ಜಿಲ್ಲೆಯವರಾಗಿರಬೇಕು. ಅಭ್ಯರ್ಥಿಗಳು ಪ್ರವರ್ಗ-1, ಪ್ರವರ್ಗ-2(ಎ), ಪ್ರವರ್ಗ-3(ಎ) ಮತ್ತು ಪ್ರವರ್ಗ-3(ಬಿ)ಗೆ ಸೇರಿದವರಾಗಿರಬೇಕು. ಶೇಕಡವಾರು ಪ್ರವರ್ಗ-1 ರಲ್ಲಿ 2 ಅಭ್ಯರ್ಥಿಗಳನ್ನು ಅಯ್ಕೆ ಮಾಡಿ ಉಳಿದ ವರ್ಗಗಳಲ್ಲಿ ನಿಯಮಾನುಸಾರ 8 ಅಭ್ಯರ್ಥಿಗಳು ಒಟ್ಟು 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಯು ಬಾರ್ ಕೌನ್ಸಿಲ್ನಲ್ಲಿ ಹೆಸರನ್ನು ನೋಂದಾಯಿಸಿರಬೇಕು. ತರಬೇತಿಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕಕ್ಕೆ ಹಿಂದೆ 2 ವರ್ಷಗಳೊಳಗಾಗಿ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕಾನೂನು ತರಬೇತಿಯು 4 ವರ್ಷಗಳ ಅವಧಿಯಾಗಿದ್ದು, ಮಾಸಿಕ ರೂ.4,000 ಗಳ ತರಬೇತಿ ಭತ್ಯೆ ನೀಡಲಾಗುವುದು. 5 ಅಭ್ಯರ್ಥಿಗಳನ್ನು ಪ್ರವರ್ಗ-2(ಎ) ರಲ್ಲಿ ಅಯ್ಕೆ ಮಾಡಲಾಗುವುದು. ಹಿಂದುಳಿದ ವರ್ಗಗಳ ಪ್ರವರ್ಗ-2ಎ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ (ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕಕ್ಕೆ) ಇರುತ್ತದೆ. ತರಬೇತಿಯ ಅವಧಿಯ ಮಧ್ಯಭಾಗದಲ್ಲಿ ಅಭ್ಯರ್ಥಿಯು ತರಬೇತಿಗೆ ಗೈರು ಹಾಜರಾದಲ್ಲಿ ಪಡೆಯಲಾಗಿರುವ ತರಬೇತಿ ಭತ್ಯೆಯ ಹಣವನ್ನು ಬಡ್ಡಿಯೊಂದಿಗೆ ಪಾವತಿಸಬೇಕಾಗುವುದು. ವಾರ್ಷಿಕ ಆದಾಯದ ಮಿತಿ ಪ್ರವರ್ಗ-2ಎ ಗೆ ರೂ.2.50 ಲಕ್ಷಗಳ ವಾರ್ಷಿಕ ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದೆ.
ಅಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಸಮಿತಿಯು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ಸರ್ಕಾರಿ ವಕೀಲರು ಅಥವಾ ಕನಿಷ್ಟ 15 ವರ್ಷಗಳ ವೃತ್ತಿಯಲ್ಲಿ ಅನುಭವ ಹೊಂದಿರುವ ವಕೀಲರ ಅಧೀನದಲ್ಲಿ ತರಬೇತಿ ಪಡೆಯುವುದು. ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಮತ್ತು ಪದವಿ ಹಾಗೂ ಕಾನೂನು ಪದವಿಗಳಲ್ಲಿ ಪಡೆದ ಅಂಕಪಟ್ಟಿ ಪ್ರಮಾಣ ಪತ್ರದ ದೃಢೀಕರಣ ಪ್ರತಿಗಳನ್ನು ಲಗತ್ತಿಸಬೇಕು. ಅಪೂರ್ಣವಾದ ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಯನ್ನು ಯಾವುದೇ ಮುನ್ಸೂಚನೆ ಇಲ್ಲದೇ ತಿರಸ್ಕರಿಸಲಾಗುವುದು.ಹೆಚ್ಚಿನ ವಿವರಗಳಿಗಾಗಿ www.ballari.nic.in ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಬಳ್ಳಾರಿ ಇವರ ಜಾಲತಾಣದಲ್ಲಿ ಅರ್ಜಿ ನಮೂನೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಡಿ.ದೇವರಾಜ ಅರಸು ಭವನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಅಥವಾ ದೂರವಾಣಿ ಸಂಖ್ಯೆ: 08392-275751 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.