ಜಗತ್ತನ್ನೇ ಭಯದ ಮುಷ್ಟಿಯಲ್ಲಿ ಹಿಡಿದುಕೊಂಡಿರುವ ಒಮಿಕ್ರಾನ್ ಕೋವಿಡ್ನ ಮೂರನೇ ಅಲೆ ತಂದೊಡ್ಡುವ ಭೀತಿ ಮೂಡಿಸಿದೆ. ಭಾರತದಲ್ಲೂ ಸಹ ಒಮಿಕ್ರಾನ್ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾದ ಕಾರಣ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ.
ಬ್ರಿಟನ್ನಲ್ಲಿ ಒಮಿಕ್ರಾನ್ ಪ್ರಕರಣಗಳು ವ್ಯಾಪಿಸುತ್ತಿರುವುದು ಭಾರತಕ್ಕೆ ಪಾಠವಾಗಿದೆ ಎಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಿರ್ದೇಶಕ ರಣದೀಪ್ ಗುಲೇರಿಯಾ, “ನಾವು ಸಿದ್ಧವಾಗಬೇಕಿದ್ದು, ಬ್ರಿಟನ್ನಲ್ಲಿ ಆಗಿರುವಷ್ಟು ಕೆಟ್ಟ ಪರಿಸ್ಥಿತಿ ನೆಲೆಸದಂತೆ ನೋಡಿಕೊಳ್ಳಬೇಕಿದೆ. ನಮಗೆ ಒಮಿಕ್ರಾನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು. ಜಗತ್ತಿನ ಇತರೆಡೆಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದಾಗೆಲ್ಲಾ, ನಾವು ಅದನ್ನು ಸೂಕ್ಷ್ಮವಾಗಿ ಗಮನಿಸಿ, ಯಾವುದೇ ಸಾಧ್ಯತೆಗೂ ಸಜ್ಜಾಗಿರಬೇಕು. ಎಚ್ಚರ ತಪ್ಪುವುದಕ್ಕಿಂತ ಸಿದ್ಧವಾಗಿರುವುದು ಉತ್ತಮ,” ಎಂದು ತಿಳಿಸಿದ್ದಾರೆ.
ಇದುವರೆಗೂ ಭಾರತದಲ್ಲಿ ಒಮಿಕ್ರಾನ್ ಸೋಂಕಿನ 100ಕ್ಕೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ, 35, ಸೋಂಕುಗಳು ದಾಖಲಾಗಿವೆ.