ಮೈಸೂರು: ವ್ಯಸನ ಮುಕ್ತ ಕೇಂದ್ರ ಬಸವಮಾರ್ಗ ಫೌಂಡೇಷನ್ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಬರೋಬ್ಬರಿ 40 ಲಕ್ಷ ದೋಚಿ ಆರೋಪಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಂಡ್ಯ ಮೂಲದ ವಿಶಾಲ್ ರಾಜ್ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. 2022ರ ಆಗಸ್ಟ್ ನಲ್ಲಿ ವಿಶಾಲ್ ರಾಜ್ ಬಸವಮಾರ್ಗ ಫೌಂಡೇಶನ್ ಗೆ ವ್ಯಸನ ಮುಕ್ತನಾಗಲು ಬಂದಿದ್ದ. ವ್ಯಸ್ಯನ ಮುಕ್ತನಾದ ಬಳಿಕ ವಿಶಾಲ್ ರಾಜ್ ಇದೇ ಫೌಂಡೇಶನ್ ನಲ್ಲಿ ಕೆಲಸ ಮಾಡಿಕೊಂಡು ಇದೇ ಕೇಂದ್ರದಲ್ಲಿ ವಾಸವಾಗಿದ್ದ.
ಫೌಂಡೇಶನ್ ನ ಅಕೌಂಟೆಂಟ್ ಕೆಲಸ ಬಿಟ್ಟಿದ್ದಕ್ಕೆ ಅದೇ ಜಾಗಕ್ಕೆ ವಿಶಾಲ್ ರಾಜ್ ನನ್ನು ನೇಮಕ ಮಾಡಲಾಗಿತ್ತು. ಹಳೇ ಅಕೌಂಟೆಂಟ್ ಗೋಕುಲ್ ರಾಜ್ ನಿಂದ ನೆರವು ಪಡೆದು 2022ರ ಜೂನ್ 17ರಿಂದ ಜುಲೈ 24ರವರೆಗೆ 37.90 ಲಕ್ಷ ಹಣವನ್ನು ತನ್ನ ಅಕೌಂಟ್ ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಅನುಮಾನಗೊಂಡ ಮಾಲೀಕ ಪರಿಶೀಲನೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಟ್ರಸ್ಟಿ ಬಸವರಾಜ್ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ವಿಶಾಲ್ ಎಸ್ಕೇಪ್ ಆಗಿದ್ದಾನೆ.