ಶಿವಮೊಗ್ಗ ನಗರದಲ್ಲಿ ಇಂದು ಬೆಳಗಿನ ಜಾವ ಮೂರು ಗಂಟೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಲಷ್ಕರ್ ಮೊಹಲ್ಲಾದ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ.
ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಶಾಹಿದ್ ಖಾನ್ ರನ್ನು ವಶಕ್ಕೆ ಪಡೆದಿದ್ದಾರೆ. ನಗರದ ಲಷ್ಕರ್ ಮೊಹಲ್ಲಾದ ಯಾಲಕಪ್ಪನ ಬೀದಿಯಲ್ಲಿನ ಶಾಹಿದ್ ನಿವಾಸದ ಮೇಲೆ ದಾಳಿ ಮಾಡಿದ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ನಂತರ ಬೆಳಗ್ಗೆ 6 ಗಂಟೆಗೆ ಶಾಹಿದ್ ಖಾನ್ ರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಹಿದ್ ಖಾನ್ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಯ ವಲಯ ಪಿಎಫ್ಐ ಅಧ್ಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದು ದೇಶಾದ್ಯಂತ ಸುಮಾರು 60 ಕ್ಕೂ ಅಧಿಕ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಅಧಿಕಾರಿಗಳು ದಾಳಿ ನಡೆಸಿದ್ದು, ಹಣಕಾಸಿನ ಅಕ್ರಮ ವರ್ಗಾವಣೆ ಸಂಬಂಧ ದಾಳಿ ನಡೆದಿರಬಹುದೆಂದು ಹೇಳಲಾಗಿದೆ. ನಿಖರವಾದ ಕಾರಣ ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.