ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಲ್ಲಿ ನೀರಿನ ಸಂಪರ್ಕ ಪಡೆಯುವ ನಿಯಮಗಳನ್ನು ಸರಳೀಕರಣಗೊಳಿಸಲಾಗಿದ್ದು, ಎಲ್ಲ ಮನೆಗೂ ಶುದ್ಧ ಕುಡಿಯುವ ನೀರು ಲಭಿಸಲಿ ಎಂಬ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ, ಈ ಕ್ರಮ ಕೈಗೊಂಡಿದೆ.
ಹೊಸ ನಿಯಮದ ಅನ್ವಯ ನಲ್ಲಿ ನೀರಿನ ಸಂಪರ್ಕ ಪಡೆಯುವ ವೇಳೆ ದಾಖಲೆಗಳು ಇಲ್ಲದಿದ್ದ ಪಕ್ಷದಲ್ಲಿ ಆಧಾರ್ ಕಾರ್ಡ್ ಮತ್ತು ನಷ್ಟ ಭರ್ತಿ ಮುಚ್ಚಳಿಕೆ ಪಡೆದು ನಲ್ಲಿ ಸಂಪರ್ಕ ನೀಡಲು ಸೂಚಿಸಲಾಗಿದೆ. ನಷ್ಟ ಭರ್ತಿ ಮುಚ್ಚಳಿಕೆಯನ್ನು ನಿಗದಿತ ನಮೂನೆಯಲ್ಲಿ 50 ರೂಪಾಯಿ ಛಾಪಾ ಕಾಗದದ ಜೊತೆ ವಿಳಾಸದ ಪುರಾವೆಯೊಂದಿಗೆ (ಇದಕ್ಕಾಗಿ ಆಧಾರ್ / ಮತದಾರರ ಗುರುತಿನ ಚೀಟಿ / ಬ್ಯಾಂಕ್ ಪಾಸ್ ಬುಕ್ / ಪಾಸ್ಪೋರ್ಟ್) ಸಲ್ಲಿಸಬೇಕಾಗುತ್ತದೆ.
ಒಂದೊಮ್ಮೆ ಯಾವುದೇ ಮಾಲೀಕತ್ವ ಹೊಂದಿಲ್ಲದ ಕಾರಣಕ್ಕೆ ನಗರ ಸ್ಥಳೀಯ ಸಂಸ್ಥೆಗೆ ಉಂಟಾಗುವ ನಷ್ಟವನ್ನು ಭರಿಸಲು ವಿಫಲವಾದವಲ್ಲಿ ಆ ಮೊತ್ತವನ್ನು ಕಟ್ಟಡದ ಅರ್ಜಿದಾರರನ್ನು ಜವಾಬ್ದಾರರನ್ನಾಗಿಸಲಾಗುತ್ತದೆ. ಅಲ್ಲದೆ ಅಂತಹ ಸಂದರ್ಭದಲ್ಲಿ ಭೂ ಕಂದಾಯ ಕಾಯ್ದೆಯಂತೆ ಕಂದಾಯ ಬಾಕಿ ರೂಪದಲ್ಲಿ ವಸೂಲಿಗೆ ಕ್ರಮ ವಹಿಸಲು ಸೂಚಿಸಲಾಗಿದೆ.