ನಾಡಿನಾದ್ಯಂತ ಯುಗಾದಿಯ ಸಂಭ್ರಮ ಸಡಗರ ಮನೆಮಾಡಿದೆ. ಹಬ್ಬದ ಮುನ್ನಾ ದಿನವಾದ ಇಂದು ಹಬ್ಬದ ಖರೀದಿ ಜೋರಾಗಿ ಸಾಗಿದೆ. ಬೆಲೆ ತುಸು ಗಗನಕ್ಕೇರಿದ್ದರೂ ಹೂವು, ಹಣ್ಣು, ಮಾವು-ಬೇವು, ಹೊಸಬಟ್ಟೆ ಖರೀದಿ ಜೋರಾಗಿ ನಡೆದಿದೆ.
ಯುಗಾದಿಯನ್ನು ಹೊಸ ವರ್ಷವಾಗಿ ಸ್ವೀಕರಿಸುವುದರಿಂದ ಈ ಸಂದರ್ಭದಲ್ಲಿ ಭಗವಂತನನ್ನು ಪೂಜಿಸಿ ಬೇವು-ಬೆಲ್ಲವನ್ನು ಸ್ವೀಕರಿಸುವುದು ಸಂಪ್ರದಾಯ. ಇದಕ್ಕಾಗಿ ಮಾವಿನಸೊಪ್ಪಿನೊಂದಿಗೆ ಬೇವಿನಸೊಪ್ಪು, ಹೂವು ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿತ್ತು.
ಬೆಂಗಳೂರಿನ ಗಾಂಧಿ ಬಜಾರ್ ಸೇರಿದಂತೆ ರಾಜ್ಯದ ಮಾರುಕಟ್ಟೆಗಳಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿತ್ತು. ಉರಿಬಿಸಿಲನ್ನು ಲೆಕ್ಕಿಸದೆ ಖರೀದಿಯಲ್ಲಿ ತೊಡಗಿದ್ದರು. ಬಹುತೇಕ ಪ್ರಮುಖ ವೃತ್ತಗಳಲ್ಲಿ ಜನರು ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ನಗರದ ಪ್ರಮುಖ ವ್ಯಾಪಾರ ವಹಿವಾಟು ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ಬಲು ಜೋರಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಧಾರಣೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಸೇವಂತಿಗೆ, ಮಲ್ಲಿಗೆ, ಬಾಳೆ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳ ದರ ತುಸು ದುಬಾರಿಯಾಗಿದ್ದು, ಇದರ ಮಧ್ಯೆಯೂ ಖರೀದಿ ಜೋರಾಗಿದೆ.
ಜನ, ವಾಹನ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಾಹನ ದಟ್ಟಣೆ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ.
ಪ್ರಮುಖ ಹಬ್ಬವಾದ ಯುಗಾದಿಗೆ ಹೊಸ ಬಟ್ಟೆಗಳನ್ನು ಖರೀದಿಸುವುದರಿಂದ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಬರೀ ಬಟ್ಟೆ, ಹೂವು-ಹಣ್ಣು ತರಕಾರಿಯಲ್ಲದೆ ಯುಗಾದಿಗೆ ಹೊಸ ವಾಹನ, ಗೃಹೋಪಯೋಗಿ ವಸ್ತುಗಳ ಖರೀದಿಸುವವರೂ ಇದ್ದುದ್ದರಿಂದ ಮಾರುಕಟ್ಟೆ ಹಾಗೂ ವಾಣ ಜ್ಯ ಮಳಿಗೆಗಳಲ್ಲಿ ಜನಜಂಗುಳಿ ಕಂಡುಬAತು.
ಹಬ್ಬದ ಮುನ್ನಾದಿನವಾದ ಇಂದು ಅಮವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆಚರಣೆಗಳು ನಡೆದವು. ಒಟ್ಟಾರೆ ನಗರ ಹಾಗೂ ಗ್ರಾಮೀಣ ಭಾಗದ ಜನತೆ ಯುಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಸಿದ್ದಾರೆ.