ಶಿವಮೊಗ್ಗ ಜಿಲ್ಲೆಯ ವಾಹನ ಮಾಲೀಕರು, ಚಾಲಕರು, ಬಾಡಿಗೆ ವಾಹನ ಚಾಲಕರು, ಸರಕು ಸಾಗಣೆ ವಾಹನದ ಮಾಲೀಕರು, ವಿಐಪಿ, ಸರ್ಕಾರಿ ಆಂಬುಲೆನ್ಸ್ ವಾಹನ ಚಾಲಕರು ಸೇರಿದಂತೆ ಎಲ್ಲ ರೀತಿಯ ವಾಹನ ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ದಾಖಲಾತಿಗಳಾದ ಆರ್ಸಿ, ಎಫ್ಸಿ, ವಿಮೆ, ಟ್ಯಾಕ್ಸ್ ಕಾರ್ಡ್, ವಾಯು ಮಾಲಿನ್ಯ ತಪಾಸಣಾ ಪತ್ರ, ಪರವಾನಿಗೆ ಹಾಗೂ ತತ್ಸಮಾನದ ವಾಹನ ಚಾಲನಾ ಅನುಜ್ಞಾ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿಕೊಂಡು ನಂತರ ವಾಹನದಲ್ಲಿ ಪ್ರಯಾಣಿಸಬೇಕು. ವಾಹನದಲ್ಲಿ ಯಾವುದೊಂದು ದಾಖಲೆ ಅಸಿಂಧುವಾಗಿದ್ದರೆ ಅಥವಾ ಚಾಲನೆಯಲ್ಲಿ ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಲ್ಲ ರೀತಿಯ ದಾಖಲಾತಿಗಳನ್ನು ಹೊಂದಿದ ವಾಹನಗಳಲ್ಲಿ ಮಾತ್ರ ಪ್ರಯಾಣಿಸಬೇಕು.
ಬಸ್ ನಿಲ್ದಾಣಗಳಲ್ಲಿ ಕೋರಿಕೆಯ ನಿಲುಗಡೆ ಹಾಗೂ ವಾಹನ ನಿಲ್ದಾಣದ ಸ್ಥಳಗಳಲ್ಲಿ ಕಡ್ಡಾಯವಾಗಿ ನಿಲ್ಲಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ತಿಳಿಸಿದೆ. ಈ ಸಂಬಂಧ ದೂರುಗಳೇನಾದರೂ ಬಂದಲ್ಲಿ ವಾಹನ ಮಾಲೀಕರ ಮೇಲೂ, ಪರವಾನಗಿದಾರರ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಗಂಗಾಧರ್ ತಿಳಿಸಿದ್ದಾರೆ.
ಸಾರ್ವಜನಿಕ ವಾಹನವಾಗಿದ್ದಲ್ಲಿ ಪ್ರಯಾಣಿಕರು, ಸರಕು ಸಾಗಣೆ ವಾಹನವಾಗಿದ್ದಲ್ಲಿ ಸರಕನ್ನು ಮಾತ್ರ, ಬಾಡಿಗೆ ವಾಹನವಾಗಿದ್ದಲ್ಲಿ ಪ್ರಯಾಣಿಕರು ಹೀಗೆ ವಾಹನಗಳ ಉದ್ದೇಶಗಳಿಗೆ ತಕ್ಕಂತೆ ಕ್ಷೇಮದ ಪ್ರಯಾಣವನ್ನು ಕೈಗೊಳ್ಳಬೇಕು ಹಾಗೂ ಎಲ್ಲರೂ ವಾಹನ ನಿಯಮಗಳನ್ನು ಪಾಲನೆ ಮಾಡಬೇಕು. ಅಪಘಾತರಹಿತ ಚಾಲನಾ ನಿಯಮ ಪಾಲಿಸುವ ಚಾಲಕರೇ ರಾಜ್ಯದ ಹೆಮ್ಮೆಯ ಚಾಲಕರು ಎಂದು ತಿಳಿಸಲಾಗಿದೆ.