ರಾಜ್ಯ ರಾಜಧಾನಿಯಲ್ಲೊಂದು ಘೋರ ಕೃತ್ಯ ನಡೆದಿದೆ. ಹೆತ್ತ ತಾಯಿಯೊಬ್ಬಳು ತನ್ನ ಮಗುವನ್ನೇ ನಾಲ್ಕನೇ ಅಂತಸ್ತಿನಿಂದ ಕೆಳಗೆಸೆದು ಹತ್ಯೆ ಮಾಡಿದ್ದು, ಘಟನೆಯ ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿರುವ ಅದ್ವೈತ ಆಶ್ರಯ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ದಂತ ವೈದ್ಯೆಯಾಗಿರುವ ಸುಷ್ಮಾ ತನ್ನ ಮಗಳು ದಿತಿಯನ್ನು ಕೆಳಗೆ ಎಸೆದು ಹತ್ಯೆಗೈದಿದ್ದಾಳೆ.
ಬಳಿಕ ಆಕೆಯೂ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ಗಮನಿಸಿ ಅಕ್ಕಪಕ್ಕದ ನಿವಾಸಿಗಳು ಓಡಿಬಂದ ವೇಳೆ ಕಾಪಾಡಿ ಕಾಪಾಡಿ. ಮಗು ಕೈ ತಪ್ಪಿ ಕೆಳಗೆ ಬಿದ್ದಿದೆ ಎಂದು ಕೂಗಿಕೊಂಡಿದ್ದಾಳೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿತ್ತಾದರೂ ಅಷ್ಟರಲ್ಲಾಗಲೇ ಸಾವನ್ನಪ್ಪಿದೆ.
ಬಳಿಕ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಸ್ವತಃ ಸುಷ್ಮಾ ತನ್ನ ಮಗುವನ್ನು ಎತ್ತಿಕೊಂಡು ಬಂದು ಕೆಳಗೆ ಬಿಸಾಡಿರುವುದು ಕಂಡು ಬಂದಿದೆ. ಅದಕ್ಕೂ ಮುನ್ನ ಯಾರಾದರೂ ನೋಡುತ್ತಿದ್ದರಾ ಎಂಬದನ್ನೂ ಆಕೆ ಪರಿಶೀಲಿಸಿದ್ದಾಳೆ. ಇದೀಗ ಆಕೆಯ ವಿರುದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.