ಆಘಾತಕಾರಿ ಘಟನೆಯೊಂದರಲ್ಲಿ ಗಾಜಿಯಾಬಾದ್ ನ ಕವಿನಗರ ಪ್ರದೇಶದಲ್ಲಿ ಕಾರೊಂದು ವ್ಯಕ್ತಿಯೊಬ್ಬನ ಮೇಲೆ ಹರಿದು ಆತನನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದಿದೆ. ಬಿಜೆಪಿ ಧ್ವಜದ ಸ್ಟಿಕ್ಕರ್ ಅಂಟಿಸಿದ್ದ ಕಾರೊಂದು ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಚಲಿಸಿದೆ. ಎದೆನಡುಗಿಸುನ ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ.
ವ್ಯಕ್ತಿಯೊಬ್ಬರು ರಸ್ತೆಯ ಮಧ್ಯದಲ್ಲಿ ಕುಳಿತಿದ್ದಾಗ ಆತನ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಚಲಿಸಿದೆ. ಈ ವೇಳೆ ವ್ಯಕ್ತಿ ಕಾರಿನಡಿ ಸಿಲುಕಿಕೊಂಡಿದ್ದು ಚಾಲಕ ಕಾರ್ ನಿಲ್ಲಿಸದೇ ವ್ಯಕ್ತಿಯನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದಿದ್ದಾನೆ.
ತಕ್ಷಣವೇ ರಸ್ತೆಯಲ್ಲಿ ಮತ್ತೊಂದು ವಾಹನದಲ್ಲಿದ್ದ ವ್ಯಕ್ತಿಗಳು ಮತ್ತು ಸ್ಥಳೀಯರು ಹಿಂಬಾಲಿಸಿ ಚಾಲಕ ಕಾರ್ ನಿಲ್ಲಿಸುವಂತೆ ತಡೆದಿದ್ದಾರೆ. ಕಾರ್ ನಡಿ ಸಿಲುಕಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಜಿಯಾಬಾದ್ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.