alex Certify ವಿಶ್ವ ಯೋಗ ದಿನಾಚರಣೆ; ‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಯೋಗ ದಿನಾಚರಣೆ; ‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್‌ 21 ‘ವಿಶ್ವ ಯೋಗ ದಿನಾಚರಣೆ’, ಪಾತಂಜಲ ಯೋಗಸೂತ್ರದ ಸಮಾಧಿಪಾದದ 28ನೆಯ ಸೂತ್ರದ ಪ್ರಕಾರ ಅಷ್ಟಾಂಗ ಯೋಗದ ಅನುಷ್ಟಾನದಿಂದ ಯೋಗಾಭ್ಯಾಸಿಯ ಚಿತ್ತದ ಅಶುದ್ದಿಯು ಕರಗಿ ಅವನಿಗೆ ವಿವೇಕ ಲಭಿಸುವವರೆಗೆ ಜ್ಞಾನದೀವಿಗೆಯಾಗಿರುವುದು ಎಂಬರ್ಥದ ಈ ಸೂತ್ರದಲ್ಲಿ ಸೂಚಿಸಿರುವ ಅಷ್ಟಾಂಗ, ಯೋಗದ 8 ಹಂತಗಳು ಮತ್ತು ಅವುಗಳ ಸಂಕ್ಷಿಪ್ತ ವಿವರಣೆಗಳು ಓದುಗರಿಗಾಗಿ ಸಂಗ್ರಹಿಸಿ ನೀಡಲಾಗಿದೆ.

ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರಾಧಾರಣ ಧ್ಯಾನ ಸಮಾಧಯೋಷ್ಟಾವಂಗಾನಿ

ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ ಇವೇ ಅಷ್ಟಾಂಗಗಳು.

ಅಹಿಂಸಾ-ಸತ್ಯಾಸ್ತೇಯ : ಬ್ರಹ್ಮಚರ್ಯಾ ಪರಿಗ್ರಹಾ ಯಮಾಃ

1) ಯಮ : ಇಲ್ಲಿ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಸಾರ್ವತ್ರಿಕ ನಿಯಮಗಳು ಅಂದರೆ ಸಾಮಾಜಿಕ ಶಿಸ್ತಿನ ಬಗ್ಗೆ, ಅವುಗಳ ಅನುಶಾಸನದ ಬಗ್ಗೆ ತಿಳಿಸಲಾಗಿದೆ. ಯಾವುದೆಂದರೆ

ಅ] ಅಹಿಂಸೆ : ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸದಿರುವುದು – ವೈರತ್ವ-ತ್ಯಾಗ

ಆ] ಸತ್ಯ : ಯಾವಾಗಲೂ ಸತ್ಯವಾಕ್ಯ ಪರಿಪಾಲನೆ.

ಇ] ಆಸ್ತೇಯ : ಕದಿಯದೇ ಇರುವುದು, ವಸ್ತುಗಳ ಬಗ್ಗೆ ಅಪೇಕ್ಷೆ ಸಲ್ಲದು.

ಈ] ಬ್ರಹ್ಮಚರ್ಯ : ಪಂಚೇಂದ್ರಿಯಗಳ ನಿಗ್ರಹ, ಜ್ಞಾನ ಸಂಪಾದನೆ

ಉ] ಅಪರಿಗ್ರಹ : ‘ಬೇಕು-ಬೇಕು’ ಎಂಬ ಮನಸ್ಥಿತಿಯಿಂದ ‘ಸಾಕು-ಸಾಕು’ಗೆ ಪರಿವರ್ತನೆ.

ಶೌಚ-ಸಂತೋಷ-ತಪಃ ಸ್ವಾಧ್ಯಾಯೇಶ್ವರ ಪ್ರಣೇಧಾನಾನಿ ನಿಯಮಾಃ

2) ನಿಯಮ : ಇಲ್ಲಿ ಪ್ರತಿಯೊಬ್ಬರು ಪಾಲಿಸಬೇಕಾದ ವೈಯುಕ್ತಿಕ ನಿಯಮಗಳ ಬಗ್ಗೆ ಅಂದರೆ ನಡವಳಿಕೆಗಳು, ನಿಬಂಧನೆಗಳು, ಚೌಕಟ್ಟುಗಳ ಬಗ್ಗೆ ತಿಳಿಸಲಾಗಿದೆ. ಯಾವುದೆಂದರೆ

ಅ] ಶೌಚ : ದೇಹ-ಮನಸ್ಸುಗಳ, ಅಂತರಂಗ-ಬಹಿರಂಗಗಳ ಶುದ್ಧತೆ

ಆ] ಸಂತೋಷ : ತೃಪ್ತ ಭಾವನೆ ಹೊಂದಿ ಮನಸ್ಸಿನ ಶಾಂತಿ ಕಾಪಾಡಿಕೊಳ್ಳುವುದು.

ಇ] ಸ್ವಾಧ್ಯಾಯ : ಸ್ವವಿಮರ್ಶೆ ಮಾಡಿಕೊಳ್ಳುತ್ತಾ ಜೀವನದ ಬಗ್ಗೆ ಹೊಸ ದೃಷ್ಟಿ-ಸೃಷ್ಟಿ.

ಈ] ತಪಸ್ಸು : ಸಾಧನೆಯ ಮಾರ್ಗದಲ್ಲಿ ಅಡಚಣೆ ಅಡ್ಡಿಗಳನ್ನು ದಹಿಸುವುದು.

ಉ] ಈಶ್ವರ ಪ್ರಣೀಧಾನ : ದೇವರಿಗೆ ನಮ್ಮ ತಪ್ಪು-ಒಪ್ಪುಗಳ ಸಮರ್ಪಣೆ, ಶರಣಾಗತ ಭಾವ.

ಸ್ಥಿರಂಸುಖಮಾಸನಂ

3) ಆಸನ : ದೇಹದ ಭಂಗಿಯ ಕುರಿತು ‘ಆಸನಾನಿ ಚ ತಾವಂತೋ ಯಾವಂತೋ ಜೀವ ಜಂತವಃ’ ಅಂದರೆ ಈ ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳೆಷ್ಟೊ, ಅಷ್ಟು ಆಸನಗಳಿವೆ. ದೇಹ ಮತ್ತು ಮನಸ್ಸುಗಳ ಸಾಮರಸ್ಯ ಏರ್ಪಡಿಸಲು ಆಸನಗಳ ಕಲಿಕೆ ಆರೋಗ್ಯ ದೃಷ್ಟಿಯಿಂದ ಅನಿವಾರ್ಯ.

ತಸ್ಮಿನ್ ಸತಿ ಶ್ವಾಸಪ್ರಶ್ವಾಯೋರ್ಗತಿ ವಿಚ್ಛೇದಃ ಪ್ರಾಣಾಯಾಮಃ

4) ಪ್ರಾಣಾಯಾಮ : ನಮ್ಮ ಉಸಿರಾಟದ ನಿಯಂತ್ರಣದಿಂದ ದೇಹ, ಮನಸ್ಸುಗಳಲ್ಲಿ ಉಂಟಾಗುವ ಅತ್ಯದ್ಭುತ ಪರಿಣಾಮ, ಫಲಿತಾಂಶಗಳ ಕುರಿತಾದ ಕಲಿಕೆ, ಪ್ರಾಣಗಳಲ್ಲಿ ಪಂಚವಿಧ.

ಅ] ಪ್ರಾಣ

ಆ] ಅಪಾನ

ಇ] ವ್ಯಾನ

ಈ] ಉದಾನ

ಉ] ಸಮಾನ ಮತ್ತು ಇವುಗಳಿಗೆ ಉಪಪ್ರಾಣಗಳಾಗಿ

ಊ] ನಾಗ

ಋ] ಕೃಕರ

ಎ] ಕೂರ್ಮ

ಏ] ದೇವದತ್ತ

ಐ] ಧನಂಜಯಗಳು ಸಹ ದೇಹದ ವಿವಿಧೆಡೆ ಕಾರ್ಯನಿರ್ವಹಿಸಿ ಆರೋಗ್ಯವನ್ನು ಕಾಪಾಡುತ್ತವೆ.

ಪ್ರಾಣಾಯಾಮಗಳಲ್ಲಿ ಮುಖ್ಯವಾಗಿ 8 ವಿಧಗಳು.

1] ಸೂರ್ಯಭೇದನ

2] ಉಜ್ಜಾಯಿ

3] ಶೀತ್ಕರಿ

4] ಶೀತಲಿ

5] ಭಸ್ತ್ರಿಕಾ

6] ಭ್ರಾಮರಿ

7] ಮೂರ್ಚಾ

8] ಪ್ಲಾವಿನಿ

ಸ್ವವಿಷಯಾ ಸಂಪ್ರಯೋಗೇ ಚಿತ್ತಸ್ಯ ಸ್ವರೂಪಾನುಕಾರ ಇವೇಂದ್ರಿಯಾಣಾಂ ಪ್ರತ್ಯಾಹಾರಃ

5) ಪ್ರತ್ಯಾಹಾರ : ಪ್ರತಿಯಾದ + ಆಹಾರ = ಪ್ರತ್ಯಾಹಾರ. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳಿಗೆ ಆಹಾರವೆನಿಸಬಹುದಾದ ಬಾಹ್ಯ ಪ್ರಪಂಚದ ಆಕರ್ಷಣೆಗಳಿಂದ ಮನಸ್ಸನ್ನು ಅಂತರ್ಮುಖಗೊಳಿಸುವ ಅಂತರಂಗದ ಸಾಧನೆಗೆ ಸೋಪಾನವೇ ಈ ಹಂತ.

ದೇಶಬಂಧಶ್ಚಿತ್ತಸ್ಯ ಧಾರಣಾಃ

6) ಧಾರಣ : ಚಂಚಲವಾದ ಮನಸ್ಸನ್ನು ಒಂದು ವಸ್ತುವಿನಲ್ಲಿ ನಿಲ್ಲಿಸುವುದೇ ಧಾರಣ ಸ್ಥಿತಿ. ಧಾರಣಾಸು ಚ ತ ಯೋಗ್ಯತಾ ಮನಸಾ ಮನಸ್ಸಿಗೆ ಅಂತರ್ಮುಖವಾಗಿಸುವ ಕಠಿಣ ಸಾಧನೆಯೇ ಮುಂದಿನ ಹಂತದ ಸಿದ್ಧತೆಗೆ ದಾರಿ.

ತತ್ರ ಪ್ರತ್ಯಯೈಕತಾನತಾ ಧ್ಯಾನಮ್

7) ಧ್ಯಾನ : ಧ್ಯಾನವೆಂದರೆ ‘ಮನಸ್ಸಿನ ಸ್ನಾನ’ವೆಂದು ಸುಲಭವಾಗಿ ಹೇಳುತ್ತೇವೆ. ಸದಾಶಿವನಿಗೆ ಅದೇ ಧ್ಯಾನ ಎನ್ನುತ್ತೇವೆ. ಆದರೆ ಧ್ಯಾನದ ಮಹತ್ವವನ್ನು ಅರಿತವನೇ ಬಲ್ಲ. ಮನಸ್ಸನ್ನು ಸಂಪೂರ್ಣವಾಗಿ ಒಂದೇ ಚಿಂತನೆಯಲ್ಲಿ ಪಳಗಿಸುವುದೇ ಧಾರಣದ ಮುಂದಿನ ಹಂತವಾದ ಈ ಧ್ಯಾನ. ಪ್ರತಿನಿತ್ಯದ 5-10 ನಿಮಿಷಗಳ ಧ್ಯಾನದಿಂದ ಅಪರಿಮಿತ ಲಾಭಗಳನ್ನು ಗಳಿಸಬಹುದಾಗಿದೆ.

ಎಲ್ಲ ಚಿಂತೆಗಳನ್ನು ಹಸಿ-ಬಿಸಿ ಆಲೋಚನೆಗಳನ್ನು ಮರೆತು ಒಂದೈದು ನಿಮಿಷಗಳ ಕಾಲ ಕಣ್ಮುಚ್ಚಿ ಕುಳಿತುಕೊಳ್ಳಿ. ನಿಜವಾದ ಆನಂದದ ಅನುಭೂತಿಯನ್ನು ಪಡೆಯಿರಿ.

ತದೇವ ಅರ್ಥಮಾತ್ರ ನಿರ್ಭಸಂ ಸ್ವರೂಪಶೂನ್ಯಮಿವ ಸಮಾಧಿಃ

8) ಸಮಾಧಿ : ಕಣ್ಣಿಗೆ ಕಾಣದ ಕೇವಲ ಅನುಭವಕ್ಕೆ ಮಾತ್ರವೇ ಬರುವ ಪರಮೋಚ್ಛ ಆನಂದದ ಮಾನಸಿಕ ಸ್ಥಿತಿಯಿದು. ಚಿತ್ತವೃತ್ತಿಗಳು ನಾಶವಾಗಿ, ಸುಪ್ತಶಕ್ತಿಗಳು ಜಾಗೃತವಾಗುವ, ಆತ್ಮ-ಪರಮಾತ್ಮನಲ್ಲಿ ಲೀನವಾಗುವ, ಪರಮಾನಂದವನ್ನು, ಜೀವನ್ಮುಕ್ತಿಯನ್ನು ಪಡೆಯುವ ಈ ಮಾನಸಿಕ ಸ್ಥಿತಿಯನ್ನು ಹೊಂದುವುದು ಅಥವಾ ಸತತ ಸಾಧನೆಯಿಂದ ಗಳಿಸುವುದೇ ಪ್ರತಿಯೊಬ್ಬ ಯೋಗಾಭ್ಯಾಸಿಯ ಪರಮಗುರಿಯೇ ಸಮಾಧಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...