ಬೆಳಗಾವಿ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. 90 ವರ್ಷದ ವೃದ್ಧೆಯನ್ನು ಆಕೆಯ ಸಂಬಂಧಿಕರೇ ದಟ್ಟ ಅರಣ್ಯದಲ್ಲಿ ಬಿಟ್ಟು ಹೋಗಿದ್ದು, ಮಹಿಳೆಯನ್ನು ನೋಡಿದ ಗ್ರಾಮಸ್ಥರು ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಖಾನಾಪುರ ತಾಲೂಕಿನ ನಾವಗಾ ಗ್ರಾಮದ ಹೊರ ವಲಯದಲ್ಲಿರುವ ಅರಣ್ಯದಲ್ಲಿ ರೈತ ರಾಜು ಎಂಬವರ ಕಣ್ಣಿಗೆ ನರಳುತ್ತ ಬಿದ್ದಿದ್ದ ಈ ವೃದ್ಧೆ ಕಂಡು ಬಂದಿದ್ದಾರೆ. ಕೂಡಲೇ ಆಕೆಗೆ ನೀರು ಕುಡಿಸಿ ಉಪಚರಿಸಿದ ಅವರು ತಮ್ಮ ಟ್ರ್ಯಾಕ್ಟರ್ ನಲ್ಲಿ ಸಮೀಪದ ಡಾಬಾಗೆ ಕರೆದುಕೊಂಡು ಬಂದಿದ್ದಾರೆ.
ಡಾಬಾ ಮಾಲಿಕರ ನೆರವಿನಿಂದ ಅಂಬುಲೆನ್ಸ್ ಕರೆಯಿಸಿ ವೃದ್ಧೆಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪೂರ್ಣವಾಗಿ ನಿತ್ರಾಣಗೊಂಡಿರುವ ಅವರು ತನ್ನ ಊರು ಮುಧೋಳ ಎಂದಷ್ಟೇ ಹೇಳುತ್ತಿದ್ದು ಇನ್ಯಾವುದೇ ಮಾಹಿತಿ ಸಿಕ್ಕಿಲ್ಲ.