ತಾಯಿಯ ಅಂತ್ಯಕ್ರಿಯೆಯಲ್ಲಿ ಹಾಜರಾಗಲು ಸಹೋದರರು ನಿರಾಕರಿಸಿದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರೇ ತಮ್ಮ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಬರೋಬ್ಬರಿ ನಾಲ್ಕು ಕಿಲೋಮೀಟರ್ ದೂರ ಸಾಗಿ ಸ್ಮಶಾನಕ್ಕೆ ತಲುಪಿ ಅಂತ್ಯಕ್ರಿಯೆ ನಡೆಸಿದ ಘಟನೆಯು ಓಡಿಶಾದ ಪುರಿಯಲ್ಲಿ ನಡೆದಿದೆ.
ಭಾನುವಾರಂದು ಪುರಿಯ ಮಂಗಳ ಘಾಟ್ನ ಅಷ್ಟಮಠಾಧೀಶರಾದ ಜಾತಿ ನಾಯಕ್ ನಿಧನರಾಗಿದ್ದರು. ಜಾತಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಆದರೆ ತಾಯಿಯ ಅಂತ್ಯಕ್ರಿಯೆ ನೆರವೇರಿಸಲು ಇಬ್ಬರು ಪುತ್ರರು ನಿರಾಕರಿಸಿದ್ದರು ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಸಂಪ್ರದಾಯಗಳನ್ನು ಮೀರಿ ನಾಲ್ವರು ಪುತ್ರಿಯರೇ ತಮ್ಮ ತಾಯಿಯ ಶವಕ್ಕೆ ಹೆಗಲಾಗಿದ್ದಾರೆ.
ಸ್ಥಳೀಯರ ಸಹಾಯದಿಂದ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತ ನಾಲ್ವರು ಸಹೋದರಿಯರು ಸ್ಮಶಾನಕ್ಕೆ ಸಾಗಿದರು. ತಾಯಿಯ ಶವವನ್ನು ಸ್ಮಶಾನಕ್ಕೆ ತಂದ ಬಳಿಕ ನೆರೆ ಹೊರೆಯವರ ಸಹಾಯದಿಂದ ಅಂತಿಮ ವಿಧಿ ವಿಧಾನಕ್ಕೆ ಸಕಲ ತಯಾರಿ ಮಾಡಿದ್ದಾರೆ. ಬಳಿಕ ತಾವೇ ತಾಯಿಯ ಅಂತ್ಯಕ್ರಿಯೆಯನ್ನು ನಡೆಸಿದರು.
ಇನ್ನು ಈ ವಿಚಾರವಾಗಿ ಮಾತನಾಡಿದ ಮೃತ ಜಾತಿ ನಾಯಕ್ ಅಳಿಯ, ನನ್ನ ಅತ್ತೆ ಕೆಲ ದಿನಗಳ ಹಿಂದಷ್ಟೇ ನಮ್ಮ ಮನೆಗೆ ಆಗಮಿಸಿದ್ದರು. ನನ್ನ ಇಬ್ಬರು ಗಂಡು ಮಕ್ಕಳು ನನ್ನ ಕಾಳಜಿ ವಹಿಸುತ್ತಿಲ್ಲ. ನನ್ನನ್ನು ನೋಡಲು ಅವರು ವರ್ಷಗಳಿಂದ ಮನೆಗೆ ಬಂದಿಲ್ಲ. ಹೀಗಾಗಿ ನೀನೇ ನನ್ನ ಹಿರಿಯ ಮಗ ಎಂದು ಹೇಳಿದ್ದರು ಅಂತಾ ಹೇಳಿದ್ರು.