ನೋಯ್ಡಾ: ಆನ್ಲೈನ್ ಮತ್ತು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ವಹಿವಾಟುಗಳಲ್ಲಿ ವಿಶ್ವದಲ್ಲೇ ಭಾರತ ಅಗ್ರಸ್ಥಾನಿ. ಆದರೂ ಸೈಬರ್ ವಂಚನೆ ಪ್ರಕರಣಗಳಿಗೇನೂ ಕೊರತೆ ಇಲ್ಲ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 1 ಪೈಸೆ ಕಡಿಮೆ ಇದ್ದ ಕಾರಣ ಸೈಬರ್ ವಂಚನೆಯಿಂದ ಗ್ರಾಹಕನೊಬ್ಬ ಬಚಾವ್ ಆಗಿರುವ ವರದಿ ಪ್ರಕಟವಾಗಿದೆ.
ಗ್ರೇಟರ್ ನೋಯ್ಡಾದ ದರಿನ್ ಗ್ರಾಮದ ನಿವಾಸಿ ಸುನಿಲ್ ಕುಮಾರ್ ಈ ಅದೃಷ್ಟಶಾಲಿ. ಈ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಕೇವಲ 9,999.99 ರೂ. ಮಾತ್ರ ಇತ್ತು. ಸೈಬರ್ ವಂಚಕರು 10,000 ರೂಪಾಯಿ ಎಗರಿಸುವುದಕ್ಕೆ ಮುಂದಾಗಿದ್ದರು. ಅದು ಫಲಿಸಲಿಲ್ಲ. ಜೂನ್ 2 ರಂದು ಈ ಕೃತ್ಯ ನಡೆದಿತ್ತು.
ಕುಮಾರ್ ತನ್ನ ಸಂಬಂಧಿಕರೊಬ್ಬರಿಗೆ 22,000 ರೂಪಾಯಿ ಪಾವತಿಸಬೇಕಾಗಿತ್ತು. ಒಂದು ಸಂಖ್ಯೆ ಹೆಚ್ಚು ಕಡಿಮೆ ಆಗಿ, ಅಪರಿಚಿತ ಖಾತೆಗೆ ಹಣ ವರ್ಗಾವಣೆ ಮಾಡಿದ್ದ. ದೋಷ ಅರಿತ ಕುಮಾರ್ ಕೂಡಲೇ ಬ್ಯಾಂಕ್ಗೆ ಮಾಹಿತಿ ನೀಡಿ ಸಹಾಯ ಕೋರಿದ್ದರು. ಆದರೆ ಬ್ಯಾಂಕ್ನವರು ಸ್ಪಂದಿಸಿಲ್ಲ. ಹೀಗಾಗಿ, ಬ್ಯಾಂಕ್ನ ಅಧಿಕೃತ ಟ್ವಿಟರ್ ಖಾತೆ ಟ್ಯಾಗ್ ಮಾಡಿ ಮನವಿ ಮಾಡಿದ್ದರು.
ಸೈಬರ್ ವಂಚಕರು ಕುಮಾರ್ ಅವರ ಟ್ವೀಟ್ ಅನ್ನು ಗಮನಿಸಿ ತತ್ಕ್ಷಣವೇ ಸಕ್ರಿಯರಾಗಿದ್ದಾರೆ. ಅಲ್ಲದೆ ಕುಮಾರ್ ಅವರನ್ನು ಸಂಪರ್ಕಿಸಿದ್ದು, ಫೋನ್ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡುವಂತೆ ಹೇಳಿದ್ದಾರೆ. ಶೀಘ್ರದಲ್ಲೇ, ಕುಮಾರ್ ಬ್ಯಾಂಕ್ ವಿವರಗಳನ್ನು ಪಡೆದ ವಂಚಕರು ಮೊದಲು 2,000 ರೂಪಾಯಿ ಎಗರಿಸಲು ಪ್ರಯತ್ನಿಸಿದರು. ಅದು ವಿಫಲವಾದ ಬಳಿಕ 10,000 ರೂಪಾಯಿ ಎಗರಿಸಲು ಪ್ರಯತ್ನಿಸಿದರು. ಆದರೆ, ಕುಮಾರ್ ಬ್ಯಾಂಕ್ ಖಾತೆಯಲ್ಲಿ ಕೇವಲ 9,999.99 ರೂ. ಇದ್ದ ಕಾರಣ ಮೊಬೈಲ್ನಲ್ಲಿ ಎಸ್ಎಂಎಸ್ ಎಚ್ಚರಿಕೆ ಸಂದೇಶ ಕಾಣಿಸಿತು.
ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದ ಕುಮಾರ್, ತಾನು ಸೈಬರ್ ವಂಚಕರ ಬಲೆಗೆ ಬಿದ್ದಿರುವುದನ್ನು ಅರಿತು ತತ್ಕ್ಷಣವೇ ನೋಯ್ಡಾ ಪೊಲೀಸರ ಸೈಬರ್ ಸೆಲ್ಗೆ ದೂರು ಸಲ್ಲಿಸಿದರು.