ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮತ ಎಣಿಕಾ ಸಿಬ್ಬಂದಿ ಈಗಾಗಲೇ ತಮಗೆ ನಿಗದಿಪಡಿಸಿದ ಕೇಂದ್ರಗಳಲ್ಲಿ ಹಾಜರಾಗಿದ್ದಾರೆ. ಸ್ಟ್ರಾಂಗ್ ರೂಮಿನಿಂದ ಮತ ಯಂತ್ರಗಳು ಹೊರಬರುವ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕಾ ಕಾರ್ಯ ನಡೆಯಲಿದೆ.
224 ಕ್ಷೇತ್ರಗಳಲ್ಲಿ ಕಣದಲ್ಲಿರುವ 2,615 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ. ಚುನಾವಣೋತ್ತರ ಸಮೀಕ್ಷೆಗಳನ್ನು ಮುಂದಿಟ್ಟುಕೊಂಡು ಸರ್ಕಾರ ರಚನೆಯ ಕುರಿತು ಹಲವು ಲೆಕ್ಕಾಚಾರಗಳು ನಡೆದಿದ್ದವಾದರೂ ಮತ ಎಣಿಕೆ ಬಳಿಕ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ.
ಹೈ ವೋಲ್ಟೇಜ್ ಕ್ಷೇತ್ರಗಳತ್ತ ಎಲ್ಲರ ಚಿತ್ತ ಹರಿದಿದ್ದು, ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ, ಕುಮಾರಸ್ವಾಮಿಯವರ ಚನ್ನಪಟ್ಟಣ, ಜಗದೀಶ್ ಶೆಟ್ಟರ್ ಸ್ಪರ್ಧಿಸಿರುವ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣದಲ್ಲಿರುವ ಶಿಗ್ಗಾಂವಿ, ಡಿಕೆ ಶಿವಕುಮಾರ್ ಅವರ ಕನಕಪುರ, ಲಕ್ಷ್ಮಣ ಸವದಿ ಸ್ಪರ್ಧಿಸಿರುವ ಅಥಣಿ ಕ್ಷೇತ್ರ ಗಮನ ಸೆಳೆದಿದೆ.