
1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ಉಂಟಾಗಿದ್ದು ಸಲ್ಮಾನ್ ಖಾನ್ಗೆ ಸಂಬಂಧಿಸಿದ ಈ ಪ್ರಕರಣದ ವರ್ಗಾವಣೆಯ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಅಂಗೀಕರಿಸಿದೆ. ಈ ಆದೇಶದ ಬಳಿಕ ಇನ್ಮುಂದೆ ಜೋಧಪುರ ಹೈಕೋರ್ಟ್ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಯಲಿದೆ.
ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣವು 1998 ರಲ್ಲಿ ನಡೆದ ಘಟನೆಯಾಗಿದೆ. ಸೆಪ್ಟೆಂಬರ್ 1998ರಲ್ಲಿ ಸಲ್ಮಾನ್ ಖಾನ್ರ ಬಾಲಿವುಡ್ ಸಿನಿಮಾದ ʼಹಮ್ ಸಾಥ್ ಸಾಥ್ ಹೈʼ ಶೂಟಿಂಗ್ಗೆಂದು ರಾಜಸ್ಥಾನದ ಕಂಕಣಿಯಲ್ಲಿ ಇದ್ದಾಗ ಎರಡು ಕೃಷ್ಣಮೃಗಗಳನ್ನು ಕೊಂದಿರುವ ಆರೋಪ ಎದುರಾಗಿತ್ತು.
ಸಲ್ಮಾನ್ ಖಾನ್ ವಿರುದ್ಧ ಭಾರತೀಯ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 9/51 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣದ ಆರೋಪ ಎದುರಿಸುತ್ತಿದ್ದ ಸಹನಟರಾದ ಸೋನಾಲಿ ಬೇಂದ್ರೆ, ಸೈಫ್ ಅಲಿ ಖಾನ್ ಹಾಗೂ ಟಬುವನ್ನು ದೋಷಮುಕ್ತಗೊಳಿಸಲಾಗಿದೆ. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ದಿನೇಶ್ ಗಾವ್ರೆ ಹಾಗೂ ದುಶ್ಯಂತ್ ಸಿಂಗ್ ಎಂದು ಗುರುತಿಸಲಾಗಿದೆ.