ಕುಡಿದ ಮತ್ತಿನಲ್ಲಿ ನಡೆದ ಗಲಾಟೆಗೆ ಧರ್ಮದ ಲೇಪನ ಹಚ್ಚಲು ಮುಂದಾಗಿದ್ದವನೊಬ್ಬ ಸಂಜೆ ವೇಳೆಗೆ ಅದೇ ಸ್ನೇಹಿತರ ಜೊತೆಗೆ ರಾಜಿ ಮಾಡಿಕೊಂಡಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.
ಶಿವಮೊಗ್ಗದಲ್ಲಿ ಈ ಘಟನೆ ನಡೆದಿದ್ದು, ಜಖಂಗೊಂಡಿದ್ದ ತನ್ನ ಆಟೋದೊಂದಿಗೆ ದೂರು ನೀಡಲು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಬಂದಿದ್ದ ಹರೀಶ್ ರಾವ್ ಎಂಬಾತ ಅದೇ ವೇಳೆ ಅಲ್ಲಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಳಿ ಕಣ್ಣೀರಿಡುತ್ತಾ, ಅನ್ಯ ಧರ್ಮದ ಇಬ್ಬರು, ಯಾರಿಗೆ ಮತ ಹಾಕಿದೆ ಎಂದು ನನ್ನನ್ನು ಕೇಳಿದಾಗ ಬಿಜೆಪಿಗೆ ಎನ್ನುತ್ತಿದ್ದಂತೆ ನನ್ನ ಮೇಲೆ ಹಲ್ಲೆ ನಡೆಸಿ ಆಟೋ ಜಖಂಗೊಳಿಸಿದ್ದಾರೆ ಎಂದು ಗೋಳಾಡಿದ್ದ.
ಇದಕ್ಕೆ ಸ್ಪಂದಿಸಿದ್ದ ಈಶ್ವರಪ್ಪನವರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಹರೀಶ್ ರಾವ್, ಅನ್ಯ ಧರ್ಮದ ವಿಚಾರ ಪ್ರಸ್ತಾಪಿಸಿದ್ದರಿಂದ ಒಂದಷ್ಟು ಆತಂಕ ಕೂಡ ಮೂಡಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ಮಾಡಿದ್ದರೆಂದು ಹೇಳಲಾದ ಅಬ್ರಾರ್ ಮತ್ತು ನಝರುಲ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬಹಿರಂಗವಾಗಿದೆ.
ಹರೀಶ್ ರಾವ್, ಅಬ್ರಾರ್ ಮತ್ತು ನಝರುಲ್ಲಾ ಸ್ನೇಹಿತರಾಗಿದ್ದು ಸೋಮವಾರ ಮಧ್ಯಾಹ್ನ ಸೋಮಿನಕೊಪ್ಪದ ಬಾರ್ ಒಂದರಲ್ಲಿ ಒಟ್ಟಿಗೆ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ವೈಯಕ್ತಿಕ ಕಾರಣಕ್ಕೆ ಜಗಳವಾಗಿ ಕೈ ಕೈ ಮಿಲಾಯಿಸಿದ್ದು, ಹರೀಶನ ಆಟೋ ಜಖಂಗೊಳಿಸಿದ್ದಾರೆ. ಇದೀಗ ಸ್ನೇಹಿತರ ನಡುವೆ ರಾಜಿಯಾಗಿದ್ದು ಆಟೋವನ್ನು ಸರಿಪಡಿಸಿಕೊಡುವುದಾಗಿ ಅಬ್ರಾರ್ ಮತ್ತು ನಝರುಲ್ಲಾ ಒಪ್ಪಿಕೊಂಡಿದ್ದಾರೆ.