ಶಿವಮೊಗ್ಗದ ಯುವಕರು ಟೆರರಿಸ್ಟ್ ಜೊತೆ ಲಿಂಕ್ ಆಗಿರುವ ವಿಷಯ ತಿಳಿದು ದಿಗ್ಬ್ರಮೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಂಧಿತರು ಅಲ್ ಖೈದಾ, ಐಸಿಸ್ ಉಗ್ರ ಸಂಘಟನೆ ಲಿಂಕ್ ಇರುವುದು ಗಾಬರಿಯಾಗುವ ವಿಷಯವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಇಬ್ಬರು ಬಂಧಿತರಾಗಿದ್ದು, ಇನೋರ್ವನ ಬಂಧನಕ್ಕೆ ಬಲೆ ಬೀಸಲಾಗಿದೆ. ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲೂ ಇವರಿದ್ದರು. ಇಂತಹ ದೇಶದ್ರೋಹಿ ಯುವ ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಗೃಹ ಸಚಿವರು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಇಂತಹ ಸಮಾಜ ವಿದ್ರೋಹಿ ಶಕ್ತಿಗಳನ್ನು ಹುಡುಕಿ ತೆಗೆಯುವ ಕೆಲಸ ಶುರುವಾಗಿದೆ. ಗೋಡೆ ಬರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಇಂತಹ ಉಗ್ರರನ್ನ ಶಿಕ್ಷಿಸುವಂತಹ ಪ್ರಕ್ರಿಯೆ ಬೇಗ ನಡೆಯಬೇಕು. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಕಾನೂನಿನ ಅಡಿಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ದೇಶದ್ರೋಹಿಳು ಯಾವುದೇ ಬಿಲದಲ್ಲಿ ಅಡಗಿದ್ದರೂ ಬಿಡುವುದಿಲ್ಲ ಎಂದರು.
ಪೊಲೀಸರ ಕಾರ್ಯ ಪ್ರಶಂಸೆಗೆ ಅರ್ಹವಾಗಿದ್ದು, ಮುಂಬರುವ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಈ ಜಾಲ ಎಷ್ಟೇ ದೊಡ್ಡದಿರಲಿ, ಭೇದಿಸಿ ಸೂಕ್ತ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು.