ಬೆಂಗಳೂರು: ಅಗತ್ಯ ಸೇವೆಗಳ ಇಲಾಖೆಗಳಲ್ಲಿನ ಸಿಬ್ಬಂದಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿನ ಶೇ. 50ರಷ್ಟು ಸಿಬ್ಬಂದಿಗಳು ಒಂದು ದಿನ ಬಿಟ್ಟು ಒಂದು ದಿನದ ಆಧಾರದ ಮೇಲೆ ಸೇವೆಗೆ ಹಾಜರಾಗಬೇಕು ಎಂದು ಆದೇಶ ಹೊರಡಿಸಲಾಗಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಆಯಾ ಇಲಾಖೆಗಳಲ್ಲಿನ ಎ ದರ್ಜೆಯ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಸೇವೆಗೆ ಹಾಜರಾಗಬೇಕು. ಕೇವಲ ಬಿ, ಸಿ ಹಾಗೂ ಡಿ ದರ್ಜೆಯ ನೌಕರಸ್ಥರು ಮಾತ್ರ ಶೇ. 50ರಷ್ಟು ಹಾಜರಾತಿಯಲ್ಲಿ ಸೇವೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ಒಂದು ವೇಳೆ ಇಲಾಖೆಯಲ್ಲಿನ ಮುಖ್ಯಸ್ಥರು ಸೂಚಿಸಿದರೆ ಸಂಬಂಧಿಸಿದ ವ್ಯಕ್ತಿ ರಜೆ ಅಥವಾ ಬೇರೆ ನೆಪ ಹೇಳದೆ ಕೆಲಸಕ್ಕೆ ಹಾಜರಾಗಬೇಕು. ಗರ್ಭಿಣಿಯರು, ಅಂಧರು ಹಾಗೂ ಅಂಗವಿಕಲರಿಗೆ ಸರ್ಕಾರ ಕಚೇರಿಗೆ ಹಾಜರಾಗದಿರಲು ಸೂಚಿಸಲಾಗಿದೆ.
ಇನ್ನು ಕೊರೊನಾ ಸೇವೆಗೆ ಸಂಬಂಧಿಸಿದಂತೆ ನಿಯೋಜಿತರಾಗಿದ್ದ ಅಧಿಕಾರಿಗಳು ಯಾವುದೇ ನೆಪ ಹೇಳದೆ ತಮ್ಮ ಸೇವೆಗೆ ಹಾಜರಾಗಬೇಕು ಎಂದು ಕೂಡ ಸೂಚಿಸಲಾಗಿದೆ.