ಇದುವರೆಗೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಮನೆಯಲ್ಲೇ ಕುಳಿತಿದ್ದ ಸಾರ್ವಜನಿಕರು ಟಿವಿ ನೋಡುವ ಹಾಗೂ ಸ್ಮಾರ್ಟ್ ಫೋನ್ ಬಳಕೆ ಮೂಲಕ ಕಾಲ ಕಳೆದಿದ್ದರು. ಹೀಗೆ ಸ್ಮಾರ್ಟ್ ಫೋನ್ ಬಳಕೆ ಮಾಡಿದವರು ಓದಲೇಬೇಕಾದ ಸುದ್ದಿ ಇಲ್ಲಿದೆ.
ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್ ಮೇಲಿನ ಅವಲಂಬನೆ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ತುಂಬಾ ಹೊತ್ತು ಕಂಪ್ಯೂಟರ್, ಟಿವಿ ವೀಕ್ಷಣೆಯಲ್ಲಿ ನಿರತರಾಗಿದ್ದರೆ ಕಣ್ಣು ಸಹಜವಾಗಿಯೇ ಆಯಾಸಕ್ಕೆ ಒಳಗಾಗುತ್ತದೆ.
ಕುಳಿತಲ್ಲಿಂದ ಎದ್ದು ಹೋಗಿ ಅಥವಾ ಕೆಲ ನಿಮಿಷ ಕಣ್ಣು ಮುಚ್ಚಿ ಆಯಾಸ ನೀಗಿಸಿಕೊಳ್ಳಬಹುದು. ಆದರೆ ಪದೇ ಪದೇ ಆಯಾಸಕ್ಕೆ ಒಳಗಾಗುವ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದೊಂದು ದಿನ ದೃಷ್ಟಿಗೆ ಆಪತ್ತು ಉಂಟಾಗಬಹುದು. ಆದ್ದರಿಂದ ಆಗಾಗ ಕಣ್ಣಿನ ಆಯಾಸ ನೀಗಿಸುವ ಕೆಲಸ ನಮ್ಮಿಂದಲೇ ಆಗಬೇಕು.
ಅದಲ್ಲದೆ ಕಣ್ಣಿನ ಆರೋಗ್ಯಕ್ಕೆ ಪೂರಕವಾಗುವ ಉತ್ತಮ ಆಹಾರ ಕ್ರಮ ರೂಢಿಸಿಕೊಳ್ಳಿ. ಕಣ್ತುಂಬ ನಿದ್ದೆ ಮಾಡಿ ಹೆಚ್ಚೆಚ್ಚು ಹಣ್ಣು, ತರಕಾರಿ ತಿನ್ನಿ. ಅದರ ಜೊತೆಗೆ ಒಂದಿಷ್ಟು ನೈಸರ್ಗಿಕ ವಸ್ತುಗಳಿಂದ ಕಣ್ಣಿನ ಸೌಂದರ್ಯ ಹಾಗೂ ಆರೋಗ್ಯ ವೃದ್ಧಿಸಿಕೊಳ್ಳಿ.
* ಕಣ್ಣುಗಳನ್ನು ಅಂಗೈನಿಂದ ಮುಚ್ಚಿ ಬೆಚ್ಚಗಿರಿಸಿ. ಇದು ಆಯಾಸ ನಿವಾರಣೆಗೆ ಸಹಕಾರಿ.
* ಬಹಳ ಹೊತ್ತು ಒಂದೇ ಕಡೆ ದೃಷ್ಟಿ ಕೇಂದ್ರಿಕರಿಸದೆ ಎಲ್ಲ ದಿಕ್ಕುಗಳನ್ನು ಒಮ್ಮೆ ಆಗಾಗ ನೋಡುತ್ತಾ ಇರಿ.
* ಸೌತೆಕಾಯಿ ಬಿಲ್ಲೆ ಅಥವಾ ಐಸ್ ಕ್ಯೂಬನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ.
* ಆಗಾಗ ಕಣ್ಣನ್ನು ಅತ್ತಿತ್ತ ಹೊರಳಿಸಿ.
* ದೀರ್ಘ ಕೆಲಸದ ನಡುವೆ ಒಂದೆರಡು ನಿಮಿಷ ಕಣ್ಣು ಮುಚ್ಚಿ ತೆರೆಯಿರಿ.
* ವಿಟಮಿನ್ ಅಂಶ ಇರುವ ಕ್ಯಾರೆಟ್, ಸೇಬು, ಕಿತ್ತಳೆ, ದ್ರಾಕ್ಷಿ ಹಣ್ಣುಗಳನ್ನು ಹೆಚ್ಚು ಸೇವಿಸಿ.
* ಹಸಿರುಸೊಪ್ಪು ಸೇವನೆಯಿಂದ ದೃಷ್ಟಿ ಚುರುಕಾಗುತ್ತದೆ.
* ಲ್ಯಾವೆಂಡರ್ ಎಣ್ಣೆಯ ಕೆಲವು ಹನಿಗಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕಣ್ಣಿನ ಮೇಲ್ಭಾಗದಲ್ಲಿ ಹಚ್ಚಿಕೊಳ್ಳಿ.
* ಆಲೂಗಡ್ಡೆ ರಸವನ್ನು ಕಣ್ಣಿನ ಕೆಳಭಾಗದಲ್ಲಿ ಹಚ್ಚುವುದರಿಂದ ಕಪ್ಪು ವರ್ತುಲವಷ್ಟೇ ಅಲ್ಲ, ಕಣ್ಣಿನ ಆರೋಗ್ಯ ಕೂಡ ಸುಧಾರಿಸುತ್ತದೆ.