ಮುಂಬೈ: ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ರೆಪೋ ದರ ಕಡಿತ ಮಾಡುವ ಬಗ್ಗೆ ಮಾಹಿತಿ ನೀಡಿದ ಅವರು, ಈ ಮೊದಲು ರೆಪೋ ದರ ಶೇಕಡ 4.4 ರಷ್ಟು ಇತ್ತು. ಈಗ ರೆಪೋ ದರವನ್ನು ಶೇಕಡ 4ಕ್ಕೆ ಇಳಿಕೆ ಮಾಡಲಾಗಿದೆ. ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರಗಳನ್ನು ಕಡಿತ ಮಾಡಲಾಗಿದೆ. ರಿವರ್ಸ್ ರೆಪೋ ದರವನ್ನು ಶೇಕಡ 3.35 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೈಗಾರಿಕಾ ಉತ್ಪಾದನೆಯ ಶೇಕಡ 15 ರಷ್ಟು ಕಡಿಮೆಯಾಗಿದೆ. ಗೃಹ, ವಾಹನ, ವೈಯಕ್ತಿಕ ಸಾಲದ ಬಡ್ಡಿ ದರಗಳನ್ನು ಕಡಿತ ಮಾಡಲಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ. ರಿವರ್ಸ್ ರೆಪೋ ದರ ಕಡಿತದಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಲಿದೆ. ಬೇಳೆಕಾಳುಗಳ ಬೆಲೆ ಏರಿಕೆ ಆತಂಕ ಹುಟ್ಟಿಸಿದೆ. ಕೃಷಿ ವಲಯ ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಕಳೆದ 30 ವರ್ಷಗಳಲ್ಲಿ ರಫ್ತು ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ಆಮದು ಪ್ರಮಾಣ ಶೇಕಡ 5.8 ರಷ್ಟು ಇಳಿಕೆಯಾಗಿದೆ. ಈಗ ಕೃಷಿ ಕ್ಷೇತ್ರದ ಬಗ್ಗೆ ಉತ್ತಮವಾದ ನಿರೀಕ್ಷೆಯಿದೆ. ವಿದೇಶಿ ವಿನಿಮಯ ಮೌಲ್ಯ 9.2 ಮಿಲಿಯನ್ಗೆ ಏರಿಕೆಯಾಗಿದೆ. 2021 ರ ಅವಧಿಯಲ್ಲೇ ಈ ಏರಿಕೆಯಾಗಿದ್ದು, ಇದು ಭಾರತಕ್ಕೆ ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿದ್ದಾರೆ.
ಜಿಡಿಪಿ ನಿರೀಕ್ಷೆಗಿಂತಲೂ ಕೆಳಗೆ ಇಳಿಯಲಿದೆ. ಪ್ರಮುಖ ಕೈಗಾರಿಕೆಗಳ ಉತ್ಪಾದನೆ ಕುಸಿತ ಕಂಡಿದೆ. ಕೊರೋನಾದಿಂದಾಗಿ ಜಾಗತಿಕ ಆರ್ಥಿಕತೆಗೆ ಪೆಟ್ಟು ಬಿದ್ದಿದ್ದು ಉತ್ಪಾದನಾ ವಲಯ ಭಾರಿ ಕುಸಿತ ಕಂಡಿದೆ. ಗ್ರಾಹಕ ಬಳಕೆಯ ವಸ್ತುಗಳ ಉತ್ಪಾದನೆಯಲ್ಲಿ ಶೇಕಡ 33ರಷ್ಟು ಇಳಿಕೆಯಾಗಿದ್ದು ಎರಡು ತಿಂಗಳಲ್ಲಿ ಆರ್ಥಿಕತೆಯ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.