ರಾಜ್ಯ ಸರ್ಕಾರ ರೈತರ ಅಲ್ಪಾವಧಿ ಸಾಲದ ಕಂತುಗಳನ್ನು ಪಾವತಿಸಲು ಜೂನ್ ಕೊನೆಯವರೆಗೆ ಕಾಲಾವಕಾಶ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇದೇ ರೀತಿ ಆದೇಶ ಹೊರಡಿಸಿದೆ. ಆದರೆ ರಿಸರ್ವ್ ಬ್ಯಾಂಕ್ ಏಪ್ರಿಲ್ 21 ರಂದು ಮತ್ತೊಂದು ಸುತ್ತೋಲೆ ಹೊರಡಿಸಿ ಮೇ 31 ರೊಳಗೆ ಸುಸ್ತಿ ಸಾಲಗಳನ್ನು ಮರುಪಾವತಿಸಲು ತಿಳಿಸಿದೆ. ಸುಸ್ತಿ ಸಾಲ ಮರು ಪಾವತಿದಲ್ಲಿ ಮಾತ್ರ ಬಡ್ಡಿರಹಿತ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಲಾಗಿದೆ. ನಬಾರ್ಡ್ ಕೂಡ ಇದೇ ರೀತಿ ಆದೇಶ ಹೊರಡಿಸಿದೆ.
ಅಲ್ಪಾವಧಿ ಬೆಳೆ ಸಾಲಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ರಿಸರ್ವ್ ಬ್ಯಾಂಕ್, ನಬಾರ್ಡ್ ಹೀಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಿರುವುದರಿಂದ ಸಾಲದ ನಿರೀಕ್ಷೆಯಲ್ಲಿದ್ದ ರೈತರು ಮತ್ತು ಸಾಲ ವಿತರಿಸುವ ಬ್ಯಾಂಕುಗಳು, ಸಹಕಾರ ಸಂಘಗಳು ಗೊಂದಲದಲ್ಲಿವೆ ಎನ್ನಲಾಗಿದೆ.
ಶೂನ್ಯ ಬಡ್ಡಿ ದರದ ಸಾಲದ ಮೇಲಿನ ಬಡ್ಡಿ ಬೆಳೆಯುತ್ತದೆ. ಅಲ್ಲದೆ, ಮುಂದಿನ ಕೃಷಿ ಚಟುವಟಿಕೆಗಳಿಗೆ ಬೆಳೆಸಾಲ ಸಿಗದ ಆತಂಕ ರೈತರಲ್ಲಿದೆ. ಮೇ 31 ರೊಳಗೆ ಸಾಲ ಪಾವತಿಸುವಂತೆ ಬ್ಯಾಂಕುಗಳು ರೈತರಿಗೆ ಸೂಚನೆ ನೀಡಿವೆ. ಮೇ 31 ರೊಳಗೆ ಸಾಲ ಪಾವತಿಸದಿದ್ದರೆ ರೈತರಿಗೆ ಶೂನ್ಯ ಬಡ್ಡಿದರ ಪ್ರಯೋಜನ ಸಿಗದಿರುವ ಸಾಧ್ಯತೆಯಿದೆ. ಶೇಕಡ 5 ರಷ್ಟು ಬಡ್ಡಿ ಹಾಕಬಹುದು ಎಂದು ಹೇಳಲಾಗಿದೆ. ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕಾಸಿಲ್ಲದೇ ಮೊದಲೇ ಸಂಕಷ್ಟದಲ್ಲಿರುವ ರೈತರು ಸಾಲ ಪಾವತಿಸುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.