ಕೈಗಾರಿಕೋದ್ಯಮಿ ರತನ್ ಟಾಟಾ ತನ್ನ ಅನುಕರಣೀಯ ಬದುಕಿನಿಂದ ಯಾವಾಗಲೂ ದೇಶದ ಜನತೆಗೆ ಆದರ್ಶಪ್ರಾಯರಾಗಿದ್ದಾರೆ.
ತಮ್ಮ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬರು ಅನಾರೋಗ್ಯಕ್ಕೆ ಒಳಗಾದ ಸುದ್ದಿ ಕೇಳಿದ ರತನ್, ಮುಂಬಯಿಯಿಂದ ಪುಣೆಗೆ ಹೋಗಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವಿಚಾರವನ್ನು ಮಾಜಿ ಉದ್ಯೋಗಿಯ ಬಂಧು ಯೋಗೇಶ್ ದೇಸಾಯಿ ಹಂಚಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅನಾರೋಗ್ಯಪೀಡಿತನಾದ ಈ ಮಾಜಿ ಉದ್ಯೋಗಿಯೊಂದಿಗೆ ಸಂವಹನ ನಡೆಸುತ್ತಿರುವ 83 ವರ್ಷದ ರತನ್ ಟಾಟಾರ ಚಿತ್ರವನ್ನು ಶೇರ್ ಮಾಡಿದ ಯೋಗೇಶ್, “ಸರ್ ರತನ್ ಟಾಟಾ ಅವರು ಶ್ರೇಷ್ಠ ಉದ್ಯಮಿಯಲ್ಲದೇ ಒಬ್ಬ ದಂತಕಥೆಯೂ ಹೌದು. ಕಳೆದ 2 ವರ್ಷಗಳಿಂದ ಅನಾರೋಗ್ಯಪೀಡಿತರಾದ ತಮ್ಮ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರನ್ನು ಭೇಟಿ ಮಾಡಲು ರತನ್ ಟಾಟಾ ಅವರು ಮುಂಬಯಿಯಿಂದ ಪುಣೆಗೆ ಬಂದಿದ್ದರು.
ಈ ವೇಳೆ ಅವರೊಂದಿಗೆ ಯಾವುದೇ ಮಾಧ್ಯಮ ಅಥವಾ ಬೌನ್ಸರ್ಗಳು ಇರಲಿಲ್ಲ. ಸಂಸ್ಥೆಗೆ ನಿಷ್ಠರಾದ ಉದ್ಯೋಗಿಗಳ ಮೇಲಿನ ಕಮಿಟ್ಮೆಂಟ್ ಮಾತ್ರವೇ ಅವರ ನಡವಳಿಕೆಯಲ್ಲಿ ಕಾಣುತ್ತಿತ್ತು. ಬರೀ ಹಣವೇ ಎಲ್ಲವೂ ಅಲ್ಲ ಎಂಬ ಪಾಠವನ್ನು ಎಲ್ಲ ಉದ್ಯಮಿಗಳಿಗೂ ಅವರಿಂದ ಕಲಿಯುವುದು ಸಾಕಷ್ಟಿದೆ. ಶ್ರೇಷ್ಠ ಮಾನವನಾಗುವುದೊಂದೇ ನಿಜಕ್ಕೂ ಲೆಕ್ಕಕ್ಕೆ ಬರುವುದು. ಹ್ಯಾಟ್ಸಾಫ್ ಸರ್!!” ಎಂದು ಯೋಗೇಶ್ ಲಿಂಕ್ಡಿನ್ನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.