ನವದೆಹಲಿ: ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿರುವ ರೈಲು, ವಿಮಾನ ಸೇವೆ ಪುನರಾರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ಲಾಕ್ ಡೌನ್ ಮುಗಿದ ನಂತರ ರೈಲು ಮತ್ತು ವಿಮಾನ ಸೇವೆ ಪುನರಾರಂಭಿಸುವ ಕುರಿತಾಗಿ ಚರ್ಚೆಗಳು ನಡೆದಿವೆ. ಮೇ 3 ರಂದು ಲಾಕ್ಡೌನ್ ತೆರವುಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಕೆಲವು ಖಾಸಗಿ ವಿಮಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಆರಂಭಿಸಿವೆ. ಆದರೆ, ರೈಲು ಮತ್ತು ವಿಮಾನ ಸೇವೆ ಪುನರಾರಂಭಿಸುವ ಕುರಿತಾಗಿ ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕುರಿತು ಮಾತನಾಡಿ, ರೈಲು ಸೇರಿ ಸಾರ್ವಜನಿಕ ಸಾರಿಗೆ ಆರಂಭಿಸುವ ಕುರಿತು ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಚರ್ಚೆಯೇ ಬೇಡ ಎಂದು ತಿಳಿಸಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಸಾರ್ವಜನಿಕ ಸಾರಿಗೆ ಆರಂಭವಾಗಲೇ ಬೇಕು. ಆದರೆ, ಯಾವಾಗ ಎನ್ನುವುದನ್ನು ಈಗಲೇ ಹೇಳಲು ಆಗುವುದಿಲ್ಲ. ಪ್ರತಿದಿನದ ಕೋರೋನಾ ಸೋಂಕಿನ ಸ್ಥಿತಿಗತಿಗಳನ್ನು ಅವಲೋಕನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕೇಂದ್ರದಿಂದ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಹರದೀಪ್ ಸಿಂಗ್ ಪುರಿ ಈಗಾಗಲೇ ಸ್ಪಷ್ಟನೆ ನೀಡಿರುವುದಾಗಿ ಪ್ರಕಾಶ್ ಜಾವಡೆಕರ್ ತಿಳಿಸಿದ್ದಾರೆ.
ಮೇ 3 ನಂತರವೂ ಲಾಕ್ಡೌನ್ ನಿರ್ಬಂಧ ಸಡಿಲಗೊಳಿಸಬಾರದು ಎಂದು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವರ ಸಭೆಯಲ್ಲಿ ಲಾಕ್ಡೌನ್ ಮುಂದುವರೆಸಲು ಸಲಹೆ ನೀಡಲಾಗಿದ್ದು, ಈ ಕುರಿತಾಗಿ ಪ್ರಧಾನಿ ಮೋದಿ ಅವರಿಗೂ ಮಾಹಿತಿ ನೀಡಲಾಗಿದೆ.