ನವದೆಹಲಿ: ಲಾಕ್ ಡೌನ್ ನಿಂದಾಗಿ ವ್ಯಾಪಾರ ಇಲ್ಲದೆ ಸೊರಗಿದವರಿಗೆ, ಲೋನ್ ಕಟ್ಟಲು ಸಾಧ್ಯವಾಗದವರಿಗೆ, ಮೊದಲ ಬಾರಿ ಸಾಲ ಪಡೆದವರಿಗೆ ಸಾಲ ಮನ್ನಾ ಮಾಡುವ ಸಾಧ್ಯತೆಯಿದೆ. ಅದೇ ರೀತಿ ವಲಸೆ ಕಾರ್ಮಿಕರಿಗೆ ಇದೇ ವಾರದಲ್ಲಿ ದೇಶಕ್ಕೆ ಹೊಸ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬಹುದೆಂದು ಹೇಳಲಾಗಿದೆ.
ಇಂದು ಬ್ಯಾಂಕ್ ಮುಖ್ಯಸ್ಥರ ಜೊತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆ ನಡೆಸಲಿದ್ದಾರೆ. ರಾಷ್ಟ್ರೀಯ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಅವರು ಸಭೆ ನಡೆಸಲಿದ್ದು ಸಭೆ ಬಳಿಕ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಸಂಪುಟ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕೇಂದ್ರದ ಎರಡನೇ ಪ್ಯಾಕೇಜ್ನಲ್ಲಿ ಯಾರಿಗೆ ಏನೆಲ್ಲ ಸಿಗಬಹುದು? ವಿಶೇಷ ಪ್ಯಾಕೇಜ್ ನಲ್ಲಿ ಯಾವ ಕ್ಷೇತ್ರಕ್ಕೆ ಸಿಗಲಿದೆ ಬಿಗ್ ಬೂಸ್ಟ್? ಎಂಬ ಚರ್ಚೆ ನಡೆದಿವೆ.
ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ನಗದು ಹಣ ಸಾಲಕ್ಕೆ ಗ್ಯಾರಂಟಿ, ಕೆಲಸದ ಬಂಡವಾಳದ ಸಾಲಕ್ಕೆ ಗ್ಯಾರಂಟಿ ನೀಡಲು ಕೇಂದ್ರ ಸರ್ಕಾರ ಯೋಜಿಸಿದೆ. ಇದರಿಂದ ಕೈಗಾರಿಕೆಗಳು ಪಡೆಯುವ ಸಾಲಕ್ಕೆ ಆಸ್ತಿ ಅಡಮಾನ ಅಗತ್ಯವಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಹಣದ ನೆರವು ನೀಡಲಾಗುವುದು.
ಇನ್ನು ವಲಸಿಗ ಕಾರ್ಮಿಕರಿಗೆ ಬೆಂಬಲದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಕಂಗೆಟ್ಟಿರುವ ವಲಸಿಗ ಕಾರ್ಮಿಕರಿಗೆ ನೇರ ನಗದು ವರ್ಗಾವಣೆ, ಉದ್ಯೋಗ ಕಡಿತ ಮಾಡದಂತೆ ಕಂಪನಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಮೊದಲ ಬಾರಿಗೆ ಸಾಲ ಪಡೆದವರಿಗೆ ಸಾಲ ಮನ್ನಾ ಮಾಡಲಾಗುವುದು. ವ್ಯಾಪಾರ ಇಲ್ಲದೆ ಸೊರಗಿದವರಿಗೆ ನೆರವು ನೀಡಲಾಗುವುದು ಎಂದು ಹೇಳಲಾಗಿದೆ. ಬ್ಯಾಂಕ್ ಗಳ ಮುಖ್ಯಸ್ಥರೊಂದಿಗೆ ಹಣಕಾಸು ಸಚಿವರು ಇಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದು, ಬಳಿಕ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಪ್ಯಾಕೇಜ್ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.