ನವದೆಹಲಿ: ಲಾಕ್ ಡೌನ್ ಜಾರಿ ಮಾಡಿದ್ದರಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮತ್ತೊಂದು ವಿಶೇಷ ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಚಿಲ್ಲರೆ ವ್ಯಾಪಾರಿಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. 7 ಕೋಟಿಗೂ ಅಧಿಕ ಸಣ್ಣ ವ್ಯಾಪಾರಿಗಳ ಸಂಘಟನೆಯಾಗಿರುವ ಸಿಎಐಟಿ ಕೇಂದ್ರ ಸರ್ಕಾರದ ಬಳಿ ನೆರವಿಗೆ ಮನವಿ ಮಾಡಿದೆ.
ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲ, ವ್ಯಾಪಾರಿ ಮತ್ತು ಉದ್ಯೋಗಿಗಳಿಗೆ ವಿಮೆ ಸೌಲಭ್ಯ, ವೇತನ ಸಂರಕ್ಷಣಾ ಯೋಜನೆ ಜಾರಿ ಮಾಡುವಂತೆ ಬೇಡಿಕೆ ಇಡಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ಯಾಕೇಜ್ ರೂಪಿಸಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ.
ಕಡಿಮೆ ಆದಾಯವಿರುವ ಸಣ್ಣ ಚಿಲ್ಲರೆ ವ್ಯಾಪಾರಿಗಳು ಮತ್ತು 60ವರ್ಷ ದಾಟಿದವರಿವಗೆ 3000 ರೂ. ಪಿಂಚಣಿ ಪಡೆಯುವ ಯೋಜನೆ ಕಳೆದ ವರ್ಷ ಜಾರಿ ಮಾಡಲಾಗಿದ್ದು, ಸಣ್ಣ ವ್ಯಾಪಾರಿಗಳ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸುವ ಸಾಧ್ಯತೆ ಇದೆ. ವ್ಯಾಪಾರಿಗಳ ಸಮಸ್ಯೆ ನಿವಾರಿಸಲು ಪ್ಯಾಕೇಜ್ ನೀಡಬಹುದೆಂದು ಹೇಳಲಾಗಿದೆ.