ಬೆಂಗಳೂರು: ಲಾಕ್ಡೌನ್ ಜಾರಿಯಾಗಿದ್ದರಿಂದ ಬಹುತೇಕ ಜನ ಊರಿಗೆ ಮರಳಿದ್ದಾರೆ. ಹೀಗೆ ಹಳ್ಳಿಗೆ ಬಂದ ಯುವಕರು, ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯ ಜನ ಮತ್ತೆ ನಗರಗಳಿಗೆ ತೆರಳುವುದು ಅನುಮಾನವೆನ್ನಲಾಗಿದೆ.
ಹಳ್ಳಿಗೆ ಬಂದ ಬಹುತೇಕರು ಸ್ವಂತ ಊರಿನಲ್ಲೇ ಉಳಿಯಲಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ಈ ವರ್ಷ ಕೃಷಿ ಚಟುವಟಿಕೆ ಚುರುಕಾಗಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳ ವೇಳೆಗೆ 7000 ಹೆಕ್ಟೇರ್ ಪ್ರದೇಶದಲ್ಲಿ ಆಗುತ್ತಿತ್ತು. ಈ ಸಲ 16,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿರುವುದೇ ಇದಕ್ಕೆ ಸಾಕ್ಷಿ ಎನ್ನುವಂತೆ ಇದೆ.
ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಜಾಸ್ತಿಯಾಗಿರುವುದರಿಂದ ಈ ಬಾರಿ ಸಾಲಕ್ಕೆ ಉತ್ತೇಜನ ನೀಡಲಿದ್ದು, 4 ಲಕ್ಷ ಹೊಸ ರೈತರಿಗೆ ಸಾಲ ನೀಡಲು ಸಹಕಾರ ಇಲಾಖೆ ಕ್ರಮಕೈಗೊಂಡಿದೆ. ಗ್ರಾಮೀಣ ಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್ ಮೊದಲಾದ ಸಹಕಾರಿ ಸಂಸ್ಥೆಗಳ ಮೂಲಕ ಹಳೆಯ ಪಹಣಿ ಪತ್ರ ಆಧರಿಸಿ ಹೊಸ ರೈತರಿಗೆ ಸಾಲ ನೀಡಲು ಸಹಕಾರ ಇಲಾಖೆ ಕ್ರಮ ಕೈಗೊಂಡಿದೆ. ಹಳ್ಳಿಗೆ ಮರಳಿದ ಯುವಕರು ಕಾರ್ಮಿಕರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಲ ನೀಡಲಿದ್ದು, 4 ಲಕ್ಷ ಹೊಸ ರೈತರಿಗೆ ಸಾಲ ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.