ನವದೆಹಲಿ: ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಹಾಗೂ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಪ್ಯಾಕೇಜ್ ಕುರಿತಾಗಿ ಮಾಹಿತಿ ನೀಡಿದ್ದು, ಇಪಿಎಫ್ ಗೆ ಒಳಪಟ್ಟ ನೌಕರರು ಮತ್ತು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
100 ಕ್ಕಿಂತ ಕಡಿಮೆ ಕೆಲಸಗಾರರನ್ನು ಹೊಂದಿರುವ ಹಾಗೂ 15 ಸಾವಿರ ರೂಪಾಯಿಗಿಂತ ಕಡಿಮೆ ಸಂಬಳ ಪಡೆಯುವ ಶೇಕಡ 90ರಷ್ಟು ಉದ್ಯೋಗಿಗಳು ಇರುವ ಎಂಎಸ್ಎಂಇಗಳಿಗೆ ಕೇಂದ್ರ ಸರ್ಕಾರದಿಂದ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ.
ಮುಂದಿನ ಮೂರು ತಿಂಗಳ ಕಾಲ ನೌಕರರು ಮತ್ತು ಎಂಎಸ್ಎಂಇಗಳ ಇಪಿಎಫ್ ಪಾಲನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನೌಕರರು ಮತ್ತು ಎಂಎಸ್ಎಂಇಗಳ ವಂತಿಗೆಯನ್ನು ಕೇಂದ್ರ ಸರ್ಕಾರವೇ ಪಾವತಿಸುತ್ತದೆ.
ನಿಯಮದ ಪ್ರಕಾರ ಉದ್ಯೋಗದಾತರು ಹಾಗೂ ಉದ್ಯೋಗಿಗಳು ತಲಾ ವೇತನದ ಶೇಕಡ 12ರಷ್ಟು ಹಣವನ್ನು ಇಪಿಎಫ್ ಕಟ್ಟಬೇಕಿದೆ. ಈಗ ಸರ್ಕಾರವೇ 3 ತಿಂಗಳ ಕಾಲ ಉದ್ಯೋಗಿಗಳು ಮತ್ತು ಉದ್ಯೋಗದಾತರ ವಂತಿಗೆ ಪಾವತಿಸಲಿದೆ. ಸುಮಾರು 70 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ಇದರಿಂದ ಅನುಕೂಲವಾಗುತ್ತದೆ. ನೌಕರರ ಪಾಲಿನ ಇಪಿಎಫ್ ಕೊಡುಗೆಯನ್ನು ಶೇಕಡ 10 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.