ಕೊರೊನಾ ಮಹಾಮಾರಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇತ್ತ ಜನ ಕೊರೊನಾದಿಂದ ನಲುಗಿದರೆ, ಅತ್ತ ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿ ಹೋಗುತ್ತಿದೆ. ಸರ್ಕಾರಗಳು ಆರ್ಥಿಕತೆ ಹಿಂಜರಿತ ಸರಿದೂಗಿಸಲು ಪ್ರಯತ್ನ ಮಾಡುತ್ತಿವೆ. ಆಯಾಯ ರಾಜ್ಯಗಳಿಗಳಿಗನುಗುಣವಾಗಿ ಸಡಿಲಿಕೆ ಮಾಡಲಾಗಿದೆ. ಸಡಿಲಿಕೆ ಬಿಟ್ಟ ಬೆನ್ನಲ್ಲೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ ಅಂತಾರೆ ಅನೇಕರು.
ಈ ನಡುವೆ ಸರ್ಕಾರ ಹಿಂದುಳಿದ, ರೈತರು, ಶ್ರಮಿಕ, ಹಾಗೂ ಕಾರ್ಮಿಕ ವರ್ಗದವರಿಗೆ ವಿಶೇಷ ಪ್ಯಾಕೇಜ್ನ ಘೋಷಣೆ ಮಾಡಿದೆ. ಹೀಗಾಗಿ ಇದನ್ನು ಸರಿದೂಗಿಸುವ ಅನಿವಾರ್ಯತೆಯಲ್ಲಿದೆ ಸರ್ಕಾರ. ಇದರ ಬೆನ್ನಲ್ಲೇ ಇದೀಗ ಹೊಸ ಹೊಸ ಯೋಜನೆ ತರಲು ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ.
ಹೌದು, ಮನೆಗಳಲ್ಲಿ ಇರುವ ಚಿನ್ನ ಹಾಗೂ ವಿದೇಶಿ ವಿನಿಮಯ ಮೂಲವನ್ನು ಇಟ್ಟುಕೊಂಡು ಹೆಚ್ಚಿನ ಕರೆನ್ಸಿ ಮುದ್ರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಮನೆ ಮನೆಗಳಲ್ಲಿ ಇರುವ ಹೆಚ್ಚುವರಿ ಚಿನ್ನವನ್ನು ಯಾವುದೇ ಮೂಲವನ್ನು ವಿಚಾರಿಸುವ ಗೋಜಿಗೆ ಹೋಗದೆ ಸರ್ಕಾರ ಕೊಂಡುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆರ್ಥಿಕ ಪರಿಸ್ಥಿತಿ ಸರಿದೂಗಿಸುವ ಕೆಲಸ ಮಾಡಲು ಸರ್ಕಾರ ಯೋಚನೆ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.