ಬೆಂಗಳೂರು: ಮೇ 17 ರವರೆಗೂ ಲಾಕ್ ಡೌನ್ ಜಾರಿಯಲ್ಲಿದ್ದರೂ ಹಲವು ವಿನಾಯಿತಿಗಳನ್ನು ರಾಜ್ಯ ಸರ್ಕಾರ ನೀಡಿದ್ದು ಹಲವೆಡೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ.
ಕೆಂಪು ವಲಯದ ಜಿಲ್ಲೆಗಳಲ್ಲಿಯೂ ಗಾರ್ಮೆಂಟ್ಸ್ ಘಟಕಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕಂಟೇನ್ಮೆಂಟ್ ಏರಿಯಾ ಹೊರತುಪಡಿಸಿ ರೆಡ್ ಜೋನ್ ಗಳಲ್ಲಿ ಗಾರ್ಮೆಂಟ್ಸ್ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಬೆಂಗಳೂರಿನಲ್ಲಿರುವ ಅಪಾರ ಸಂಖ್ಯೆಯ ಗಾರ್ಮೆಂಟ್ಸ್ ನೌಕರರು ನಿಟ್ಟುಸಿರು ಬಿಡುವಂತಾಗಿದೆ. ಕೊರೋನಾ ಸೋಂಕು ಹರಡದಂತೆ ನಿಯಮಗಳನ್ನು ಅನುಸರಿಸಿ ಶೇಕಡ 33 ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ರಫ್ತು ಬದ್ಧತೆ ಹೊಂದಿರುವ ಗಾರ್ಮೆಂಟ್ಸ್ ಘಟಕಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕೆಲಸ ನಿರ್ವಹಿಸಲು ತಿಳಿಸಲಾಗಿದೆ. ಕೇಂದ್ರ ಗೃಹ ಮಂತ್ರಾಲಯದ ಆದೇಶದ ಅನ್ವಯ ಮೇ 17 ರವರೆಗೂ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಈ ನಡುವೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿ ಕೆಂಪು ವಲಯದ ಜಿಲ್ಲೆಗಳಲ್ಲಿ ಮಾನ್ಯತೆ ಪಡೆದಿರುವ ಉಡುಪು ರಫ್ತು ಪ್ರಚಾರ ಮಂಡಳಿಯಲ್ಲಿ ನೊಂದಾಯಿಸಿದ ಉಡುಪು ಘಟಕಗಳು ಶೇಕಡ 33ರಷ್ಟು ಕಾರ್ಮಿಕರೊಂದಿಗೆ ನಿಗದಿತ ನಿಯಮಗಳನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.