ಬೆಂಗಳೂರು: ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಗಳ ನಡುವೆ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ.
ರೈತರಿಗೆ ಪೂರ್ಣಪ್ರಮಾಣದಲ್ಲಿ ಬೆಳೆ ಸಾಲ ವಿತರಣೆಗೆ ಯೋಜನೆ ರೂಪಿಸಲಾಗಿದೆ. ಶೂನ್ಯ ಬಡ್ಡಿದರದಲ್ಲಿ 14 ಸಾವಿರ ಕೋಟಿ ರೂಪಾಯಿಯ ಸಾಲ ನೀಡುವ ಗುರಿ ಹೊಂದಲಾಗಿದೆ. ಪ್ರಸ್ತುತ ಲಾಕ್ಡೌನ್ ಜಾರಿಯಾಗಿದ್ದರಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ರೈತರ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿದೆ. ಉತ್ತಮ ಬೆಲೆ ಸಿಗದೇ ರೈತರು ಆತಂಕದಲ್ಲಿದ್ದು, ಅವರಿಗೆ ಅನುಕೂಲ ಕಲ್ಪಿಸಲು ಸಹಕಾರ ಸಂಘಗಳ ಮೂಲಕ ಬೆಳೆ ಸಾಲ ವಿತರಣೆಗೆ ರಾಜ್ಯ ಸರ್ಕಾರ ಈಗಾಗಲೇ ಚಾಲನೆ ನೀಡಲಾಗಿದೆ. ಮೇ 6 ರ ವರೆಗೆ ಸುಮಾರು 71 ಸಾವಿರ ರೈತರು ಸಾಲ ಪಡೆದುಕೊಂಡಿದ್ದಾರೆ.
ಕಳೆದ ಬಾರಿ 22.42 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 13,470 ಕೋಟಿ ರೂಪಾಯಿ ಸಾಲ ವಿತರಿಸಲಾಗಿತ್ತು ಈ ಬಾರಿ 18.32 ಲಕ್ಷ ರೈತರನ್ನು ಅರ್ಹರೆಂದು ಗುರುತಿಸಿದ್ದು ಅವರು ಸೇರಿದಂತೆ ಉಳಿದ ರೈತರಿಗೂ ದಾಖಲೆ ಆಧರಿಸಿ ಸಾಲ ನೀಡಲಾಗುವುದು. ಈ ಬಾರಿಯೂ ಶೂನ್ಯ ಬಡ್ಡಿದರದಲ್ಲಿ 14000 ಕೋಟಿ ರೂಪಾಯಿ ಸಾಲ ನೀಡಲು ಯೋಜಿಸಲಾಗಿದೆ ಎಂದು ಹೇಳಲಾಗಿದೆ.