ಕೋವಿಡ್ 19 ವಿವಿಧ ಕ್ಷೇತ್ರವನ್ನು ನಜ್ಜುಗುಜ್ಜು ಮಾಡಿದೆ. ಇದರಲ್ಲಿ ಆತಿಥ್ಯ ಕ್ಷೇತ್ರ ಕೂಡ ಸೇರಿದೆ. ಹೀಗಾಗಿ ಇವುಗಳಿಗೆ ಚೇತರಿಕೆ ನೀಡುವ ಉದ್ದೇಶದಿಂದ ದೆಹಲಿ ಸರ್ಕಾರವು ದಿನದ 24 ಗಂಟೆಯೂ ರೆಸ್ಟೋರೆಂಟ್ಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ನಿರ್ಧಾರಕ್ಕೆ ಹೋಟೆಲ್ ಉದ್ಯಮ ಸ್ವಾಗತಿಸಿದೆ.
ಇತ್ತೀಚೆಗೆ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಹತ್ವದ ಸಭೆ ಕರೆದಿದ್ದು, ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸದಸ್ಯರು ಭಾಗವಹಿಸಿದ್ದರು.
ಸರ್ಕಾರ ಹಾಕಿರುವ ಷರತ್ತಿಗೆ ಒಳಪಟ್ಟು ದಿನದ 24 ಗಂಟೆಯೂ ರೆಸ್ಟೋರೆಂಟ್ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಪರವಾನಗಿ ವಿಚಾರದಲ್ಲೂ ಅನೇಕ ತೀರ್ಮಾನ ಕೈಗೊಳ್ಳಲಾಗಿದೆ.
ದೆಹಲಿಯ ರೆಸ್ಟೋರೆಂಟ್ಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ, ರೆಸ್ಟೋರೆಂಟುಗಳು ಸುಗಮವಾಗಿ ನಡೆಯುವಾಗ ತೊಂದರೆಗಳನ್ಮು ತೊಡೆದುಹಾಕಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಅರವಿಂದ್ ಕೇಜ್ರಿವಾಲ್ ಕೂಡ ಹೇಳಿಕೆ ನೀಡಿದ್ದಾರೆ.