ಲಾಕ್ಡೌನ್ ಜಾರಿ ಮಾಡಿದ್ದರಿಂದ ಆರ್ಥಿಕತೆಗೆ ದೊಡ್ಡ ಹೊಡೆತವೇ ಬಿದ್ದಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿದ್ದು ಮದ್ಯ ಪ್ರಿಯರಿಗೆ ಆದಷ್ಟೇ ಖುಷಿ ಸರ್ಕಾರಗಳಿಗೂ ಆಗಿದೆ.
ಅನೇಕ ರಾಜ್ಯಗಳಲ್ಲಿ ವಿಶೇಷ ಕೊರೋನಾ ತೆರಿಗೆ ಹಾಕುವ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಲಾಗಿದೆ. ಆಂದ್ರಪ್ರದೇಶ, ದೆಹಲಿ, ಪಶ್ಚಿಮಬಂಗಾಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮದ್ಯದ ಮೇಲೆ ಹೆಚ್ಚುವರಿ ತೆರಿಗೆಯನ್ನು ಹಾಕಲಾಗಿದೆ. ಇನ್ನೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮದ್ಯದ ಮೇಲೆ ಹೆಚ್ಚು ತೆರಿಗೆ ಹಾಕಲು ತೀರ್ಮಾನಿಸಿದ್ದಾರೆ.
ಕೊರೋನಾ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯಪ್ರಿಯರ ಒತ್ತಡ ಮತ್ತು ಆರ್ಥಿಕ ಸಂಕಷ್ಟದ ವೇಳೆ ಆದಾಯ ಸಂಗ್ರಹಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಆದಾಯ ಹೆಚ್ಚಳಕ್ಕೆ ಹೊಸ ಕ್ರಮವಾಗಿ ಮದ್ಯದ ಮೇಲೆ ಕೊರೋನಾ ಟ್ಯಾಕ್ಸ್ ಹಾಕಲಾಗುತ್ತಿದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಮದ್ಯದ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿದ್ದು, ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ಹೆಚ್ಚಳ ಮಾಡಲಾಗುತ್ತಿದೆ. ಮದ್ಯ ಮತ್ತು ಪೆಟ್ರೋಲ್-ಡೀಸೆಲ್ ಮೇಲೆ ವ್ಯಾಟ್ ಹೆಚ್ಚಳ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದುಬರಲಿದೆ.