ಶಿವಮೊಗ್ಗ: ಲಾಕ್ ಡೌನ್ ಜಾರಿಯಾಗಿದ್ದರಿಂದ ಸ್ಥಗಿತಗೊಂಡಿದ್ದ ಬಹುತೇಕ ವಹಿವಾಟುಗಳೆಲ್ಲ ಆರಂಭವಾಗಿದ್ದು ಅಂತೆಯೇ ಮೇ 11 ರ ಸೋಮವಾರದಿಂದ ಅಡಿಕೆ ವಹಿವಾಟು ಆರಂಭಿಸಲು ಶಿವಮೊಗ್ಗ ಎಪಿಎಂಸಿ ವರ್ತಕರು ಮತ್ತು ಸಹಕಾರಿ ಸಂಸ್ಥೆಗಳು ಮುಂದಾಗಿವೆ.
ಮಲೆನಾಡು ಮತ್ತು ಸುತ್ತಮುತ್ತಲಿನ ಅಡಿಕೆ ಬೆಳೆಗಾರರಲ್ಲಿ ಅಡಿಕೆ ವಹಿವಾಟು ಆರಂಭವಾಗುತ್ತಿರುವುದು ಸಂತಸ ತಂದಿದೆ. ಕಳೆದ ಒಂದೂವರೆ ತಿಂಗಳಿನಿಂದ ಅಡಿಕೆ ಮಾರುಕಟ್ಟೆ ಬಂದ್ ಆಗಿದ್ದರಿಂದ ಬೆಳೆಗಾರರಿಗೆ ಅಡಿಕೆ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ.
ಗುಟ್ಕಾ ಉಗುಳುವುದರಿಂದ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧ ಮಾಡಲಾಗಿತ್ತು. ಇದರಿಂದಾಗಿ ಅಡಿಕೆ ಬೆಳೆಗಾರರು ನಿಷೇಧ ಮುಂದುವರೆದರೆ ಅಡಿಕೆ ಬೆಲೆ ಕುಸಿತದ ಆತಂಕದಲ್ಲಿದ್ದರು. ನಂತರದಲ್ಲಿ ನಿಷೇಧ ಹಿಂಪಡೆಯಲಾಗಿದ್ದು, ಈಗ ವಹಿವಾಟು ಕೂಡ ಆರಂಭವಾಗುತ್ತಿರುವುದು ಬೆಳೆಗಾರರಲ್ಲಿ ಸಂತಸ ತಂದಿದೆ.
ರಾಜ್ಯದ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಗುಟ್ಕಾ ತಯಾರಿಕೆಗೆ ಬಳಕೆಯಾಗುತ್ತದೆ. ಉತ್ತರ ಭಾರತದ ರಾಜ್ಯಗಳಲ್ಲಿ ಪಾನ್ ಮಸಾಲ, ಗುಟ್ಕಾ ಕಂಪನಿಗಳು ಲಾಕ್ ಡೌನ್ ಕಾರಣದಿಂದ ಬಂದ್ ಆಗಿವೆ. ಮಾರಾಟ ಕೂಡ ಬಂದ್ ಆಗಿತ್ತು. ಶಿವಮೊಗ್ಗದಲ್ಲಿ ಸೋಮವಾರದಿಂದ ಅಡಿಕೆ ವಹಿವಾಟು ಆರಂಭವಾಗುತ್ತಿರುವುದರಿಂದ ಅಡಿಕೆ ಬೆಳೆಗಾರರು ಮತ್ತು ವರ್ತಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.