ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಅಕ್ಷಯ ತೃತೀಯದಂದು ಹೆಚ್ಚಿನ ಸಂಖ್ಯೆಯ ಜನ ಚಿನ್ನವನ್ನು ಖರೀದಿಸುತ್ತಾರೆ.
ಸದ್ಯ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಆನ್ಲೈನ್ ಮೂಲಕ ಖರೀದಿಗೆ ಬಹುತೇಕ ಮಾರಾಟ ಮಳಿಗೆಗಳು ಅವಕಾಶ ಕಲ್ಪಿಸಿವೆ. ಇನ್ನು ಹಸಿರು ವಲಯದಲ್ಲಿ ಎರಡು ಗಂಟೆಗಳ ಕಾಲ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಗ್ರೀನ್ ಜೋನ್ ಇರುವ ಜಿಲ್ಲೆಗಳಲ್ಲಿ ಎರಡು ಗಂಟೆಗಳ ಕಾಲ ಚಿನ್ನದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು ವಹಿವಾಟು ನಡೆಸಲು ಚಿನ್ನದ ಅಂಗಡಿಯವರು ಸಿದ್ಧತೆ ನಡೆಸಿದ್ದಾರೆ.
ಗ್ರಾಹಕರಿಗೆ ವಿಡಿಯೋ ಕಾಲ್ ಮೂಲಕ ಚಿನ್ನಾಭರಣ ತೋರಿಸಿ ಅವರ ಆಯ್ಕೆಯ ಆಭರಣಗಳನ್ನು ಖರೀದಿಸಿದ ಬಳಿಕ ಆಭರಣದ ಜೊತೆ ಜೊತೆಗೆ ಸಿಹಿ ತಿನಿಸುಗಳನ್ನು ಮನೆಗೆ ಪಾರ್ಸಲ್ ಕಳಿಸಲು ಕೆಲವೆಡೆ ಸಿದ್ಧತೆ ನಡೆಸಲಾಗಿದೆ.
ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಆನ್ಲೈನ್ ನಲ್ಲಿ ಖರೀದಿಗೆ ಹೆಚ್ಚಿನವರು ಅವಕಾಶ ಕಲ್ಪಿಸಿದ್ದು ಮೇಕಿಂಗ್ ಚಾರ್ಜ್ ನಲ್ಲಿ ಶೇಕಡ 30 ರವರೆಗೆ ರಿಯಾಯಿತಿ ನೀಡಲಾಗಿದೆ. ಆನ್ಲೈನ್ನಲ್ಲಿ ಚಿನ್ನಾಭರಣ ಖರೀದಿಸಿ ಹಣ ಪಾವತಿಸಬೇಕು. ಲಾಕ್ ಡೌನ್ ಮುಗಿದ ನಂತರ ಮಳಿಗೆಗೆ ಆಗಮಿಸಿ ಚಿನ್ನ ಪಡೆಯಬಹುದಾಗಿದೆ. ಹಸಿರು ವಲಯದ ಜಿಲ್ಲೆಗಳಲ್ಲಿ ಎರಡು ಗಂಟೆಗಳ ಕಾಲ ಚಿನ್ನಾಭರಣ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಆಭರಣ ವರ್ತಕರ ಸಂಘದ ಅಧ್ಯಕ್ಷ ರಾಮಾಚಾರಿ ಹೇಳಿದ್ದಾರೆ.